ನವದೆಹಲಿ: ನವದೆಹಲಿಯ ರೋಹಿಣಿ ಕ್ಷೇತ್ರದ ಸೆಕ್ಟರ್ 4 ರಲ್ಲಿ ಮುನ್ನೂರಕ್ಕೂ ಅಧಿಕ ಮಂದಿ ವಾಸಿಸುವ ದಲಿತರ ಬಡಾವಣೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರನ್ನತೀರ್ಥರು ಭೇಟಿ ನೀಡಿದರು.
ವಿಶ್ವಹಿಂದು ಪರಿಷತ್ ಮತ್ತು ಸೇವಾಭಾರತಿಯ ಸಹಯೋಗದಲ್ಲಿ ತಮ್ಮ 39 ಚಾತುರ್ಮಾಸ್ಯ ವ್ರತದ ಅಂಗವಾಗಿ ಈ ಬಡಾವಣೆ ಭೇಟಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂದಿನ ಮೂರು ಭಾನುವಾರಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಶ್ರೀರಾಮ ಮಂತ್ರದ ಜಯಘೋಷದೊಂದಿಗೆ ನೂರಾರು ಮಂದಿಯೊಂದಿಗೆ ಶ್ರೀಗಳು ಬಡಾವಣೆಯಲ್ಲಿ ಸಂಚರಿಸಿದರು.
ಆರಂಭದಲ್ಲಿ 5 ಮನೆಗಳಿಗೆ ತೆರಳಿ ಶ್ರೀ ಮಠದ ವತಿಯಿಂದಲೇ ಒದಗಿಸಿದ ಶ್ರೀರಾಮ ಹಾಗೂ ಉಡುಪಿ ಕೃಷ್ಣನ ಫೋಟೋಗಳನ್ನಿಟ್ಟು ದೀಪಗಳನ್ನು ಬೆಳಗಿದರು. ಮನೆಮಂದಿ ಶ್ರೀಗಳ ಕಾಲಿಗೆ ನೀರೆರೆದು ಆರತಿ ಬೆಳಗಿ ಮಾಲಾರ್ಪಣೆಗೈದು ಬರಮಾಡಿಕೊಂಡರು.
ಬಳಿಕ ಮನೆಯ ಪ್ರತಿಯೊಬ್ಬರ ಹೆಸರು ಉದ್ಯೋಗ ಶಿಕ್ಷಣ ಇತ್ಯಾದಿಗಳನ್ನು ಕೇಳಿ, ಉಭಯಕುಶಲೋಪರಿ ನಡೆಸಿದರು. ಮನೆಮಂದಿಗೆ ಹತ್ತು ಬಾರಿ ರಾಮಮಂತ್ರವನ್ನು ಉಪದೇಶಿಸಿ, ಪ್ರಸಾದ ನೀಡಿ ಆಶೀರ್ವದಿಸಿದರು.
ಬಳಿಕ ಬಡಾವಣೆಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಗೌರವಿಸಿದರು. ರಾಮಕೃಷ್ಣರ ತಾರಕ ಮಂತ್ರ ಮನೆಮಂದಿ ಎಲ್ಲ ಸೇರಿ ನಿತ್ಯ ಮಾಡಬೇಕು. ಮೈ ಮನಸ್ಸು ಬುದ್ಧಿ, ಪ್ರತೀ ಮನೆಗಳು ನಮ್ಮ ನಮ್ಮ ಬಡಾವಣೆ ಊರು ಕೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ರಾಮರಾಜ್ಯದ ಭಾಗವೇ ಆಗಿದೆ. ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ರಾಷ್ಟ್ರದ ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕ ಕುಲವಂತ ರಾಣಾ ಅವರಲ್ಲಿ ಬಡಾವಣೆಯ ಸ್ವಚ್ಛತೆ, ಮೂಲಭೂತ ಸೌಕರ್ಯಗಳ ನವೀಕರಣ ತುಂಬಾ ಹಳೆಯದಾಗಿರುವ ಮನೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಸಹಾಯವನ್ನಾದರೂ ಪಡೆದು ದುರಸ್ತಿಗೊಳಿಸಿಕೊಡುವಂತೆ ಸೂಚಿಸಿದರು.
ಸ್ಥಳೀಯ ವಿಹಿಂಪ ಮತ್ತು ಸೇವಾಭಾರತಿಯ ಮುಖಂಡರು ಕಾರ್ಯಕರ್ತರು ವ್ಯವಸ್ಥೆಯಲ್ಲಿ ಸಹಕರಿಸಿದರು. ಮಠದ ವತಿಯಿಂದ ಎಲ್ಲರಿಗೂ ರಾಮ- ಕೃಷ್ಣ ರ ಫೋಟೋ, ಸಿಹಿತಿಂಡಿಯುಳ್ಳ ಪ್ರಸಾದದ ಕಿಟ್ ಅನ್ನು ಸ್ವಾಮೀಜಿ ವಿತರಿಸಿದರು.

