ಪೆರ್ಲ: ಎಣ್ಮಕಜೆ ಪಂಚಾಯಿತಿಯ ಚವರ್ಕಾಡಿನಲ್ಲಿ ನೂತನ ಅಂಚೆ ಕಚೇರಿ ಅಂಚೆ ಕಚೇರಿ ಆರಂಭಿಸುವಬಗ್ಗೆ ಸ್ಥಳೀಯ ನಾಗರಿಕರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಅಂಚೆಕಚೇರಿ ಸ್ಥಾಪನೆಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯ ಅಧಿಕಾರಿಗಳು ಸ್ಥಳ ಸಂದರ್ಶನ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಚವರ್ಕಾಡ್ ಪ್ರದೇಶದ ಜನಸಂಖ್ಯೆ, ಸಾರ್ವಜನಿಕರ ಅಗತ್ಯತೆ, ಸುತ್ತಮುತ್ತಲಿನ ಗ್ರಾಮಗಳಿಗೆ ಲಭ್ಯವಿರುವ ಅಂಚೆ ಸೇವೆಗಳು ಹಾಗೂ ಸೂಕ್ತ ಕಟ್ಟಡದ ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳನ್ನು ತಂಡ ಪರಿಶೀಲಿಸಿತು. ಸ್ಥಳೀಯ ನಿವಾಸಿಗಳು ಮತ್ತು ಮುಖಂಡರು ಅಧಿಕಾರಿಗಳಿಗೆ ಪ್ರದೇಶದ ಜನರು ಎದುರಿಸುತ್ತಿರುವ ಅಂಚೆ ಸೇವೆಗಳ ಸಮಸ್ಯೆಯನ್ನು ವಿವರಿಸಿ, ಚವರ್ಕಾಡ್ನಲ್ಲಿ ಶೀಘ್ರ ಅಂಚೆ ಕಚೇರಿ ಆರಂಭಿಸುವಂತೆ ಮನವಿ ಮಾಡಿದರು.
ಪಂಚಾಯಿತಿಯ ಒಂದು ಹಾಗೂ ಎರಡನೇ ವಾರ್ಡು ಒಳಗೊಂಡ ಈ ಪ್ರದೇಶ ಭೌಗೋಳಿಕವಾಗಿ ಕೇರಳದಲ್ಲಿ ಗುರುತಿಸಿಕೊಂಡಿದ್ದರೂ, ಇಲ್ಲಿನ ಜನತೆ ವ್ಯವಹಾರಗಳಿಗೆ ಕರ್ನಾಟಕವನ್ನೇ ಆಶ್ರಯಿಸುತ್ತಿದ್ದಾರೆ. ಅಡ್ಯನಡ್ಕ ಇವರಿಗೆ ಸನಿಹದ ಪೇಟೆಯಾಗಿದ್ದು, ಪತ್ರ ವ್ಯವಸಹಾರಗಳಿಗೆ ಕರ್ನಾಟಕದಲ್ಲಿರುವ ಅಂಚೆ ಕಚೇರಿಯನ್ನೇ ಆಶ್ರಯಿಸಿಕೊಂಡಿರಬೇಕಾದ ಅನಿವಾರ್ಯತೆಯಿದೆ. ಇದರಿಂದ ಇವರಿಗೆ ಅಂಚೆ ಸೇವೆಗಳು ವಿಳಂಬವಾಗುತ್ತಿರುವುದಲ್ಲದೆ, ಕೆಲವೊಂದು ಸವಲತ್ತುಗಳೂ ಕೈತಪ್ಪಲು ಕಾರಣವಾಗುತ್ತಿರುವುದಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಅಂಚೆಕಚೇರಿ ಸೌಲಭ್ಯವಿಲ್ಲದೆ ಚವರ್ಕಾಡು ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ'ಸಮರಸ ಸುದ್ದಿ ' ಈ ಹಿಂದೆ ಸಮಗ್ರ ವರದಿ ಪ್ರಕಟಿಸಿತ್ತು.
ಸ್ಥಳೀಯ ನಿವಾಸಿಗಳ ಪ್ರಕಾರ, ಚವರ್ಕಾಡ್ ಮತ್ತು ಆಸುಪಾಸಿನ ಗ್ರಾಮಗಳ ನೂರಾರು ಮಂದಿ ಅಂಚೆ ಸೇವೆಗಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾಗುತ್ತಿದೆ. ಹೊಸ ಅಂಚೆ ಕಚೇರಿ ಸ್ಥಾಪನೆಯಾದರೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮುಖಂಡರಾದ ಐತಪ್ಪ ಕುಲಾಲ್, ಎಂ.ಎಚ್. ಅರೀಸ್ ಶೇಣಿ, ಕಲಂದರ್ ಅಡ್ಯನಡ್ಕ, ಅಶ್ರಫ್, ಸಿದ್ದೀಕ್ ಚವರ್ಕಾಡ್ ಮೊದಲಾದವರು ಉಪಸ್ಥಿತರಿದ್ದರು. ಅಂಚೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಯ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.



