ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ, ನಾರಾಯಣಿ ನದಿಯ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯೊಬ್ಬರ ಶವದ ಮೇಲಿದ್ದ ಚಿನ್ನದ ಓಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ವ್ಯಕ್ತಿಗಳು, ಮಹಿಳೆಯೊಬ್ಬರ ಶವದ ಮೇಲಿದ್ದ ಚಿನ್ನದ ಓಲೆಗಳನ್ನು ಹೊರತೆಗೆಯುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
41 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡಿರುವ ನೇಪಾಳ ಪೊಲೀಸರು, ಮೃತ ಮಹಿಳೆಯ ಕಿವಿಯಿಂದ ಓಲೆ ಕಳವು ಮಾಡಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಹಿಳೆಯ ಶವವನ್ನು ಮರದ ಹಲಗೆಗಳನ್ನು ಬಳಸಿ ಹೊರತೆಗೆದಿದ್ದಾರೆ. ಬಳಿಕ ಆಕೆಯ ತಲೆ ಕೂದಲನ್ನು ಹಿಡಿದು ಮೇಲಕ್ಕೆ ಎಳೆದು ಕಿವಿಗಳಲ್ಲಿದ್ದ ಓಲೆಗಳನ್ನು ತೆಗೆಯುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ನಾರಾಯಣಿ ನದಿಯ ಪ್ರವಾಹದಿಂದಾಗಿ ಮಹಿಳೆ ಮೃತದೇಹ ಕೊಚ್ಚಿಕೊಂಡು ಬಂದಿದೆ' ಎಂದು ಚಿತ್ವಾನ್ ಪೊಲೀಸರು ಖಚಿತಪಡಿಸಿದ್ದಾರೆ.
ವಿಡಿಯೊ ಆಧರಿಸಿ 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಎಂಬುವರನ್ನು ಬಂಧಿಸಲಾಗಿದೆ ಎಂದು ನೇಪಾಳದ ಸುದ್ದಿ ಪೋರ್ಟಲ್ 'ಖಬರ್ಹಬ್' ವರದಿ ಮಾಡಿದೆ.
ಸಂಕಷ್ಟದ ಸಮಯದಲ್ಲಿ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ಲೂಟಿ ಮಾಡುವುದು ಅಥವಾ ಯಾವುದೇ ರೀತಿಯ ಅಮಾನವೀಯ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನೇಪಾಳ ಭೀಕರ ಪ್ರವಾಹ: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 392ಕ್ಕೆ ಏರಿಕೆಯಾಗಿದೆ. 290 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರಾಸರಿ 1.5 ಮೀಟರ್ಗಿಂತಲೂ (5 ಅಡಿ) ಹೆಚ್ಚು ಕೆಸರು ತುಂಬಿಕೊಂಡಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ 'ಸಿಸಿಟಿವಿ' ವರದಿ ಮಾಡಿದೆ. ರಸ್ತೆ, ಸೇತುವೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಮಳೆ ಮುಂದುವರಿದಂತೆ ಭೂಕುಸಿತ ಎದುರಾಗುವ ಭೀತಿ ಎದುರಾಗಿದೆ.

