ಅಹಮದಾಬಾದ್: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ಹೃದಯ ಸಾಗಾಟ ಮಾಡಲಾಯಿತು. ಇದರೊಂದಿಗೆ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಿದಂತಾಗಿದೆ.
ಗುಜರಾತ್ನ ಭರೂಚ್ ಜಿಲ್ಲೆಯ ಅಂಕಲೇಶ್ವರದ ಜಯಾಬೆನ್ ಮೋದಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅಹಮದಾಬಾದ್ನ ಯು.ಎನ್. ಮೆಹ್ತಾ ಆಸ್ಪತ್ರೆಗೆ ಹೃದಯವನ್ನು ರವಾನಿಸಲಾಗಿದೆ.
ಅಂಗಾಂಗ ದಾನದಿಂದ ಕಸಿ ಪ್ರಕ್ರಿಯೆಯವರೆಗೆ ಸಮಯ ಅತ್ಯಂತ ನಿರ್ಣಾಯಕ ಎಂಬುದನ್ನು ಅರಿತ ಅಧಿಕಾರಿಗಳು ತಕ್ಷಣವೇ 'ಗ್ರೀನ್ ಕಾರಿಡಾರ್' ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಆಸ್ಪತ್ರೆಯಿಂದ ರೈಲು ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ಹೃದಯವನ್ನು ತರಲಾಯಿತು. ಬಳಿಕ ವಂದೇ ಭಾರತ್ ರೈಲಿನಲ್ಲಿ ಹೃದಯ ಕೊಂಡೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೃದಯ ಕಸಿ ಪ್ರಕ್ರಿಯೆಯನ್ನು ಕೆಲವೇ ಗಂಟೆಗಳಲ್ಲಿ ಪೂರ್ಣಗೊಳಿಸಬೇಕಾಗಿದ್ದರಿಂದ ರೈಲಿನ ಗರಿಷ್ಠ ವೇಗವು ಅತ್ಯಂತ ನಿರ್ಣಾಯಕವಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸದ್ಯ, ಹೃದಯವನ್ನು ರೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದ್ದು, ಮೆಹ್ತಾ ಆಸ್ಪತ್ರೆಯಲ್ಲಿ ನಡೆದ 78ನೇ ಹೃದಯ ಕಸಿ ಶಸ್ತ್ರಚಿಕಿತ್ಸೆ ಇದಾಗಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಶುಕ್ರವಾರ, ಭಾರತೀಯ ರೈಲ್ವೆಯು ಜೀವಂತ ಹೃದಯವನ್ನು ಯಶಸ್ವಿಯಾಗಿ ಸಾಗಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿತ್ತು ಎಂದು ಪ್ರಕಟಣೆ ತಿಳಿಸಿದೆ.
ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್ಪ್ರೆಸ್ ಮೂಲಕ ಸೂರತ್ನಿಂದ ಅಹಮದಾಬಾದ್ಗೆ ಹೃದಯವನ್ನು ತಲುಪಿಸಲಾಗಿತ್ತು.
ಈ ಐತಿಹಾಸಿಕ ಕಾರ್ಯಾಚರಣೆಯು ವಂದೇ ಭಾರತ್ ಎಕ್ಸ್ಪ್ರೆಸ್ನ ವೇಗ, ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸುವುದರ ಜತೆಗೆ, ತುರ್ತು ವೈದ್ಯಕೀಯ ಸಾರಿಗೆ ಮತ್ತು ಆರೋಗ್ಯ ಸೇವೆಗಳಿಗೆ ಬೆಂಬಲ ನೀಡುವಲ್ಲಿ ಭಾರತೀಯ ರೈಲ್ವೆ ಪ್ರಮುಖ ಪಾತ್ರವಹಿಸಿದೆ ಎಂದು ಪ್ರಕಟಣೆ ಹೇಳಿದೆ.

