ನವದೆಹಲಿ: 'ಸಂಸ್ಕರಿಸಿದ ಆಹಾರ ಪೊಟ್ಟಣಗಳ ಮೇಲ್ಭಾಗದಲ್ಲಿ ಪೌಷ್ಟಿಕಾಂಶಗಳ ಮಾಹಿತಿ ಮುದ್ರಿಸುವ (ಲೇಬಲಿಂಗ್) ಕುರಿತು ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಜಂಕ್ ಫುಡ್ಗಳ ಮೊರೆಹೋಗುತ್ತಿರುವುದು ಹೆಚ್ಚಾಗುತ್ತಿದೆ.
ಹೀಗಾಗಿ ಸಂಸ್ಕರಿಸಿದ ಆಹಾರ ಪೊಟ್ಟಣಗಳ ಮೇಲೆ ಪೌಷ್ಟಿಕಾಂಶಗಳ ವಿವರ ಮುದ್ರಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ '3ಎಸ್- ಅವರ್ ಹೆಲ್ತ್ ಸೊಸೈಟಿ' ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಜೆ.ಬಿ.ಪಾರ್ದೀವಾಲಾ, ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠವು, ಈ ಕುರಿತು ನಿರ್ಧಾರ ಕೈಗೊಳ್ಳಲು ವಿಳಂಬ ಮಾಡುತ್ತಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
'ಸ್ಥೂಲಕಾಯವು ದೇಶದಲ್ಲಿರುವ ಸಾರ್ವಜನಿಕ ಆರೋಗ್ಯ ವಲಯದ ಅತಿ ದೊಡ್ಡ ಸವಾಲು ಎಂದು ಗುರುತಿಸಲಾಗಿದೆ' ಎಂದು ತಿಳಿಸಿತು.
ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಬೃಜೇಂದ್ರ ಚಾಹರ್, 'ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಪೌಷ್ಟಿಕಾಂಶಗಳ ಮಾಹಿತಿ ಮುದ್ರಿಸಲು ಸಾಧ್ಯವಿಲ್ಲ' ಎಂದು ಪ್ರಮಾಣಪತ್ರ ಸಲ್ಲಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಪಾರ್ದೀವಾಲಾ, 'ನೀವು ನ್ಯಾಯಾಲಯಕ್ಕೆ ಅಗೌರವ ತೋರುವಿರಾ' ಎಂದು ಪ್ರಶ್ನಿಸಿತು.
ಚಿಲಿ, ಇಸ್ರೇಲ್ ಹಾಗೂ ಕೆನಡಾದಲ್ಲಿ ಅಳವಡಿಸುತ್ತಿರುವ ಪದ್ಧತಿ ಹಾಗೂ ನಿಯಂತ್ರಣಗಳನ್ನು ಉಲ್ಲೇಖಿಸಿದ ನ್ಯಾಯಪೀಠ, 'ಭಾರತವು ಇನ್ನೂ ಅಭಿವೃದ್ಧಿಯಾಗದ ದೇಶವಾಗಿಯೇ ಉಳಿಯಬೇಕೆ' ಎಂದು ಈ ವೇಳೆ ಪ್ರಶ್ನಿಸಿದೆ.
'ಪ್ಯಾಕ್ ಮಾಡಿದ ಆಹಾರದಲ್ಲಿರುವ ಪೌಷ್ಟಿಕಾಂಶ ಕುರಿತಂತೆ ಪೊಟ್ಟಣದ ಮೇಲ್ಭಾಗದಲ್ಲಿ ಮುದ್ರಿಸಬೇಕು. ಇದರಿಂದ, ಗ್ರಾಹಕರು ಸತ್ವಯುತ ಆಹಾರ ಖರೀದಿ ಮಾಡಲು ಸಾಧ್ಯವಾಗುತ್ತದೆ. ಈ ಕುರಿತು ಕೇಂದ್ರ ಸರ್ಕಾರ ಹಾಗೂ ತಜ್ಞರು ಸೇರಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ತಿಳಿಸಿದೆ.
'ಕೇಂದ್ರ ಸರ್ಕಾರವೇ ಈ ಕುರಿತು ನಿರ್ಣಯ ತೆಗೆದುಕೊಳ್ಳಲಿದೆ ಎಂದು ಭಾವಿಸಿದ್ದೇವೆ. ಇಲ್ಲದಿದ್ದರೆ ನ್ಯಾಯಾಲಯವೇ ಸೂಕ್ತ ನಿರ್ದೇಶನ ನೀಡಲಿದೆ' ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಅರ್ಜಿಯ ಮುಂದಿನ ವಿಚಾರಣೆಯನ್ನು ಸೆ.10ಕ್ಕೆ ಮುಂದೂಡಿದೆ.

