ನವದೆಹಲಿ: ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಎದುರು ಮಾತನಾಡಲು ಭಯಪಟ್ಟು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಚರ್ಚೆಯಿಂದ ದೂರ ಓಡುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಿತಿನ್ ನವೀನ್, 'ಅಮಿತ್ ಶಾ ಅವರ ರಾಜಕೀಯ ಪಯಣವು ಎಲ್ಲರಿಗೂ ತಿಳಿದಿದೆ.
ಅವರು ಸದನದಲ್ಲಿ ವಾಸ್ತವಾಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ, ವಿರೋಧ ಪಕ್ಷಗಳಿಗೆ ಮಾತೇ ಹೊರಡುವುದಿಲ್ಲ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ' ಎಂದು ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದುದ್ದಕ್ಕೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಇಡೀ ವಿರೋಧ ಪಕ್ಷದ ಧೋರಣೆಯು 'ಅರಾಜಕೀಯ ಮನಸ್ಥಿತಿ ಮತ್ತು ಪ್ರಜಾಪ್ರಭುತ್ವ-ವಿರೋಧಿ ಚಿಂತನೆ'ಯಿಂದ ಕೂಡಿತ್ತು. ಈಗಲೂ ಕೂಡ ಅವರು ಯಾವುದೇ ವಿಷಯಗಳ ಕುರಿತು ಗಂಭೀರ ಚರ್ಚೆಗೆ ಸಿದ್ಧರಿಲ್ಲ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿ ಪ್ರತಿಭಟನೆಯ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ. ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ನಾನು ಸದನದಲ್ಲಿ ಉತ್ತರಿಸುತ್ತೇನೆ. ಆದರೆ, ಈ ಕುರಿತ ಚರ್ಚೆಗೆ ವಿರೋಧ ಪಕ್ಷದವರ ಜೊತೆ ಸಮಾಲೋಚಿಸಿ ಎಂದು ಗೃಹ ಸಚಿವ ಅಮಿತ್ ಶಾ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು.

