ಕಾಸರಗೋಡು: ನೀರು ಸೇದುವ ವೇಳೆ ಆಯ ತಪ್ಪಿ ಬಾವಿಗೆ ಜಾರಿ ಬಿದ್ದ ಪರಿಣಾಮ ಪೆರಿಯಾ ವಡಕ್ಕೇಕರಿಯ ನಡುವಿಲ್ ವೀಡ್ ನಿವಾಸಿ, ಬಿಜೆಪಿ ಪೆರಿಯಾ ವಲಯ ಸಮಿತಿ ಅಧ್ಯಕ್ಷ ಪುರುಷೋತ್ತಮನ್ (64) ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಮನೆಯ ಸಮೀಪವಿರುವ ತರವಾಡು ಮನೆಗೆ ನೀರು ಸೇದುವುದಕ್ಕಾಗಿ ಅವರು ತೆರಳಿದ್ದು, ಒಂದು ಬಕೆಟ್ ನೀರನ್ನು ಮನೆಗೆ ತಂದು, ತೆರಳಿದವರು ನಂತರ ವಾಪಸಾಗದಿರುವುದರಿಂದ ಹುಡುಕಾಡಿದಾಗ, ಹಗ್ಗ ಹಾಗೂ ಬಕೆಟ್ ಬಾವಿಯೊಳಗೆ ಇಳಿಸಿರುವುದು ಕಂಡುಬಂದಿದೆ. ಸಂಶಯಗೊಂಡು ಅಗ್ನಿಶಾಮಕಕ್ಕೆ ನೀಡಿದ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಪ್ಯಾರಲಲ್ ಕಾಲೇಜು ಉಪನ್ಯಾಸಕರಾಗಿದ್ದ ಪುರುಷೋತ್ತಮನ್ ಅವರು ಸಕ್ರಿಯ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ಉತ್ತಮ ಕೃಷಿಕ ಹಾಗೂ ಸಂಘಟಕರಾಗಿದ್ದರು.


