ಕಾಸರಗೋಡು: ಮಂಜೇಶ್ವರ ಕಣ್ವತೀರ್ಥದಿಂದ ಇಡಯಿಲಕ್ಕಾಡ್ ವರೆಗಿನ 70ಕಿ.ಮೀಗೂ ಹೆಚ್ಚಿನ ಕರಾವಳಿ ಪ್ರದೇಶ ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿರುವುದು ಕರಾವಳಿ ಪ್ರದೇಶದ ಜನರಲ್ಲಿ ಭೀತಿಯ ವಾತಾವರಣ ಹೆಚ್ಚಿಸಿದೆ.
ಕಳೆದ ಹಲವು ದಶಕಗಳಿಂದ ಜಿಲ್ಲೆಯ ಕರಾವಳಿ ಜನತೆ ಎದುರಿಸುತ್ತಿರುವ ಕಡಲ್ಕೊರೆತ ಭೀತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳಿಗೆ ಇದುವರೆಗೆ ಸಾಧ್ಯವಾಗಿಲ್ಲ. ಪ್ರತಿ ವರ್ಷ ಸಮುದ್ರ ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ, ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲಾಗುವುದು, ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯ ಮಾತುಗಳು ಬಿಟ್ಟರೆ, ಇದುವರೆಗೂ ಕಡಲ್ಕೊರೆತ ಭೀತಿಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ. ಇದರಿಂದ ನೂರಾರು ಮನೆಗಳು ಹಾಗೂ ತೆಂಗಿನಮರ ಸೇರಿದಂತೆ ಕೃಷಿ ಪ್ರದೇಶವನ್ನು ಕಡಲು ತನ್ನ ಗರ್ಭದೊಳಗೆ ಸೇರಿಸಿಕೊಂಡಿದೆ.
ಉಪ್ಪಳ ಶಾರದಾನಗರ, ಪೆರಿಂಗಡಿ, ಮೂಸೋಡಿ, ಕೊಯಿಪ್ಪಾಡಿ, ಮೊಗ್ರಾಲ್, ಶಿರಿಯ, ಪೆರುವಾಡ್, ಚೇರಂಗೈ ಕಡಪ್ಪುರ, ಚೌಕಿ ಕಾವುಗೋಳಿ, ಉದುಮ ಜನ್ಮ ಕಡಪ್ಪುರ, ತ್ರಿಕ್ಕನ್ನಾಡ್, ಉದುಮ, ಪಳ್ಳಿಕೆರೆ ಸೇರಿದಂತೆ ವಿವಿಧ ಪ್ರದೇಶದ ಜನತೆ ಹಲವು ದಶಕಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.
ಕೋಸ್ಟಲ್ ರೆಗ್ಯುಲೇಶನ್ ಙÉೂೀನ್(ಸಿಆರ್ಜೆಡ್) ಕಾಯ್ದೆಯನ್ವಯ ಗ್ರಾಮೀಣ ಪ್ರದೇಶದಲ್ಲಿ ಸಮುದ್ರ ದಡದಿಂದ ನಿಗದಿತ ದೂರದಲ್ಲಿ ನಿರ್ಮಾಣಕಾರ್ಯ ನಡೆಸಬಹುದಾಗಿದ್ದರೂ, ಇದ್ಯಾವುದೂ ಪಾಲನೆಯಾಗುತ್ತಿಲ್ಲ. ಕೆಲವೊಂದು ಪ್ರದೇಶಗಳಿಗೆ ಅನುಸರಿಸಿ 50ಮೀ.ನಿಂದ 500ಮೀ.ಅಂತರದಲ್ಲಿಮಾತ್ರ ನಿರ್ಮಾಣಕಾರ್ಯ ಕೈಗೊಳ್ಳಬಹುದೆಂಬ ನಿಬಂಧನೆಯಿದ್ದು, ಜಿಲ್ಲೆಯ ಬಹುತೇಕ ಕಡೆ ನಿಬಂಧನೆಗಳ ಸ್ಪಷ್ಟ ಉಲಂಘನೆಯಾಗುತ್ತಿದ್ದರೂ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲೀ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂಬ ದೂರೂ ಕೇಳಿಬರುತ್ತಿದೆ.
ಕಗ್ಗಲ್ಲಿನ ತಡೆಗೋಡೆ, ಮರಳುಚೀಲದ ತಡೆಗೋಡೆ ಮೂಲಕ ಕಡಲ್ಕೊರೆತ ತಡೆಗಟ್ಟಲು ನಡೆಸುತ್ತಿರುವ ಯತ್ನಗಳೆಲ್ಲವೂ ವಿಫಲವಾಗುತ್ತಿದ್ದು, ಟೆಟ್ರಾಪಾಡ್ ಅಳವಡಿಸುವ ಮೂಲಕ ಶಾಶ್ವತಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಭರವಸೆಗಿಲ್ಲ ಕೊರತೆ:
ಜಿಲ್ಲೆಯ ಕರಾವಳಿ ಪ್ರದೇಶದ ಜನತೆ ದಶಕಗಳಿಂದ ಎದುರಿಸುತ್ತಿರುವ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಮೊರೆಯಿಡುತ್ತಿದ್ದರೂ, ಸರ್ಕಾರ ಇದನ್ನು ಆಲಿಸುವ ಸ್ಥಿತಿಯಲ್ಲಿಲ್ಲ. ಜಿಲ್ಲೆಯ ಸಂಸದ, ಶಾಸಕರನ್ನೊಳಗೊಂಡ ತಂಡ ಮಳೆಗಾಲದಲ್ಲಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ, ಫೋಸ್ ಕೊಡುವುದು ಬಿಟ್ಟರೆ, ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ ಎಂಬ ಆರೋಪ ದೀರ್ಘಕಾಲದಿಂದ ಕೇಳಿಬರುತ್ತಿದೆ. ಈ ಬಾರಿ ಉಪ್ಪಳ ಶಾರದಾನಗರ, ಚೇರಂಗೈ ಕಡಪ್ಪುರ, ಉದುಮ ಜನ್ಮಾ ಕಡಪ್ಪುರ, ಪಳ್ಳಿಕೆರೆ ಸೇರಿದಂತೆ ವಿವಿಧೆಡೆ ಭಾರಿ ಪ್ರಮಾಣದ ಕಡಲ್ಕೊರೆತದಿಂದ ಇಲ್ಲಿನ ಜನರ ಜೀವನ ದುಸ್ತರವೆನಿಸಿದೆ. ಚೌಕಿ ಕಾವುಗೋಳಿಯಲ್ಲಿ ಕಡಲ್ಕೊರೆತದಿಂದ ಈ ಬಾರಿ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್ಐ)ದ ತೋಟಗಳಿಗೂ ಭೀತಿಯುಂಟಾಗಿದೆ. ಈಗಾಗಲೇ ಆವರಣಗೋಡೆ ಹಾಗೂ ರಸ್ತೆ ಸಮುದ್ರಪಾಲಾಗಿದೆ.
ಅಭಿಮತ:
-ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ಅಧ್ಯಯನ ನಡೆಸಲಾಗುವುದು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಕ್ಷುಬ್ಧ ಸಮುದ್ರದಂತಹ ಪರಿಸ್ಥಿತಿಗಳು ಸೇರಿದಂತೆ ಯಾವುದೇ ವಿಪತ್ತು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
-ಅರ್ಜುನ್ ಪಾಂದ್ಯನ್, ಜಿಲ್ಲಾಧಿಕಾರಿ
ಕಾಸರಗೋಡು



