ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಜುಲೈ 20ರಂದು ನಡೆದ 'ಸಂಸತ್ ಚಲೊ'ಪ್ರತಿಭಟನೆ ವೇಳೆ ಅಪರಾಧ ಹಿನ್ನೆಲೆಯುಳ್ಳವರು (ರೌಡಿ ಶೀಟರ್ಗಳು) ನುಸುಳಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಪೊಲೀಸರು, ಈ ಕುರಿತು ಅಫಿಡವಿಟ್ ಸಲ್ಲಿಸಿದ್ದಾರೆ.
ಪ್ರತಿಭಟನೆ ಹತೋಟಿಗೆ ತರಲು ಪೊಲೀಸರು ನಡೆಸಿದ ಬಲಪ್ರಯೋಗದ ಕುರಿತು ಸುಪ್ರೀಂ ಕೋರ್ಟ್, ನೇಮಿಸುವ ಯಾವುದೇ ಸಮಿತಿಯಿಂದ ತನಿಖೆ ನಡೆಸಲು ದೆಹಲಿ ಪೊಲೀಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ದೆಹಲಿ ಡಿಸಿಪಿ ಸಚಿನ್ ಶರ್ಮಾ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿದ್ದ ಸುಮಾರು 30,000ಕ್ಕೂ ಹೆಚ್ಚು ಜನರ ಪೈಕಿ 2,873 ಜನರ ಮಾಹಿತಿಯು ಪೊಲೀಸ್ ಅಪರಾಧ ದಾಖಲೆಗಳೊಂದಿಗೆ ತಾಳೆಯಾಗಿದೆ. ಇವರಲ್ಲಿ 92 ಜನರು 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 47 ಜನರು ಅಧಿಕೃತ ರೌಡಿ ಶೀಟರ್ಗಳಾಗಿದ್ದಾರೆ.
ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಮುರಿದು ಸಂಸತ್ತಿನತ್ತ ನುಗ್ಗಲು ಯತ್ನಿಸಿದಾಗ ಹಿಂಸಾಚಾರ ಭುಗಿಲೆದಿತ್ತು. ಪ್ರತಿಭಟನಾಕಾರರು ಕೋಲು, ಕಲ್ಲುಗಳಿಂದ ಪೊಲೀಸ್ ಸಿಬ್ಬಂದಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, 240ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಜುಲೈ 20ರಂದೇ ಧರಣಿಗೆ ನೀಡಿದ್ದ ಅನುಮತಿ ಮುಗಿದಿದ್ದರೂ, ಪ್ರತಿಭಟನಾಕಾರರು ಸ್ಥಳವನ್ನು ಖಾಲಿ ಮಾಡಲಿಲ್ಲ. ರಾಜಕೀಯ ನಾಯಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಲು ಕರೆ ನೀಡಿದ್ದರಿಂದ ಪರಿಸ್ಥಿತಿ ಕೈಮೀರಿತು ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

