ನವದೆಹಲಿ: ನಕ್ಸಲರ ಭದ್ರಕೋಟೆಯಾಗಿದ್ದ ಕುರ್ರೆಗುಟ್ಟ ಬೆಟ್ಟದ ಮೇಲೆ ಈಗ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ(ಆ.15) ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ನಕ್ಸಲರ ಹಿಡಿತ ಹೊಂದಿದ್ದ ಪ್ರದೇಶದಲ್ಲಿ ಇದೀಗ ಅತ್ಯಂತ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನುಆಚರಿಸಲಾಗುತ್ತಿದೆ' ಎಂದು ಹೇಳಿದ್ದಾರೆ.
'ಒಮ್ಮೆ ಎಲ್ಲಿ ಬಂದೂಕುಗಳು ಘರ್ಜಿಸುತ್ತಿದ್ದವೋ, ಅಲ್ಲಿ ಈಗ ದೇಶಭಕ್ತಿ ಮಾರ್ದನಿಸುತ್ತಿದೆ. ಕೆಂಪು ಮಣ್ಣಿನ ಮೇಲೆ ಹಾರಾಡುತ್ತಿರುವ ತ್ರಿವರ್ಣ ಧ್ವಜವು ನಕ್ಸಲ್ ಮುಕ್ತ ಹೊಸ ಬಸ್ತಾರ್ನ ಶಕ್ತಿ, ಪ್ರಗತಿ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ' ಎಂದು ಹೇಳಿದ್ದಾರೆ.
ಛತ್ತೀಸಗಢದಲ್ಲಿನ ನಕ್ಸಲರ ಭದ್ರಕೋಟೆಗಳೆಂದು ಪರಿಗಣಿಸಲ್ಪಟ್ಟಿದ್ದ ಪ್ರದೇಶಗಳಲ್ಲಿ ಮೋಟಾರ್ ಸೈಕಲ್ ಮೆರವಣಿಗೆಯ ಮೂಲಕ ಸುಮಾರು 600 ಕಿ.ಮೀ ದೂರ ಕ್ರಮಿಸಿದ ಮೂರು ದಿನಗಳ 'ಬಸ್ತಾರ್ ತ್ರಿರಂಗ ಯಾತ್ರೆ'ಯು, ಬಿಜಾಪುರ ಜಿಲ್ಲೆಯ ಕರ್ರೆಗುಟ್ಟ ಬೆಟ್ಟದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಮುಕ್ತಾಯಗೊಂಡಿತು.
ಛತ್ತೀಸಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಮತ್ತು ಅರಣ್ಯ ಸಚಿವ ಕೇದಾರ್ ಕಶ್ಯಪ್ ಅವರು ಈ ಯಾತ್ರೆಯ ನೇತೃತ್ವ ವಹಿಸಿದ್ದರು. ಹಲವು ರಾಜಕಾರಣಿಗಳು, ಸ್ಥಳೀಯ ನಿವಾಸಿಗಳು ಮತ್ತು ಸಮುದಾಯದ ನಾಯಕರು ಅವರೊಂದಿಗೆ ಪಾಲ್ಗೊಂಡಿದ್ದರು.

