ರಾಂಚಿ:ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಯುವಜನರಿಗೆ ಸಂಪೂರ್ಣ ಪಾರದರ್ಶಕತೆಯೊಂದಿಗೆ ನ್ಯಾಯ ಒದಗಿಸುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಭಾನುವಾರ(ಆ.9) ಭರವಸೆ ನೀಡಿದ್ದಾರೆ.
ಮನೆಯಲ್ಲಿನ ಯಾವುದೇ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಬಹುದೇ ಹೊರತು ಲಾಠಿ ಪ್ರಹಾರದಿಂದಲ್ಲ.
ಯುವಕರ ಕಾಳಜಿಯೇ ನಮ್ಮ ಕಾಳಜಿಯಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಸ್ವಾವಲಂಬನೆಯನ್ನು ಸಹಿಸಿಕೊಳ್ಳಲಾಗದೆ, ಇಲ್ಲಿನ ಪ್ರಜಾಪ್ರಭುತ್ವವನ್ನು ಕದಡಲು ಪಟ್ಟಭದ್ರ ಹಿತಾಸಕ್ತಿಗಳು ಜಾರ್ಖಂಡ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿವೆ. ವಿದ್ಯಾರ್ಥಿಗಳ ಚಳವಳಿಯನ್ನು ರಾಜಕೀಯಗೊಳಿಸಬಾರದು ಮತ್ತು ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವವರು ಯುವಕರನ್ನು ಹಾದಿತಪ್ಪಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಪರೋಕ್ಷವಾಗಿ ಬಿಜೆಪಿಯನ್ನು ಉದ್ದೇಶಿಸಿ ಮಾತನಾಡಿದ ಸೊರೇನ್, 'ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಜಾರ್ಖಂಡ್ನ ಯುವಕರ ದಾರಿ ತಪ್ಪಿಸಲು ಎದುರಾಳಿ ರಾಜಕೀಯ ಪಕ್ಷಗಳು ಯತ್ನಿಸುತ್ತಿವೆ. ಇದರಲ್ಲಿ ಬುದ್ಧಿಜೀವಿಗಳೂ ಶಾಮೀಲಾಗಿದ್ದಾರೆ' ಎಂದು ಆರೋಪಿಸಿದ್ದಾರೆ.
ನ್ಯಾಯ ಪಡೆಯುವುದು ನಿಮ್ಮ ಹಕ್ಕು. ಆದರೆ, ಯುವಕರು ತಮ್ಮ ಹೋರಾಟಕ್ಕಾಗಿ ರಾಜಕೀಯ ಬೆಂಬಲವನ್ನು ಕೋರಬೇಡಿ ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು 16ನೇ ದಿನಕ್ಕೆ ಕಾಲಿಟ್ಟಿದ್ದು, ಆರು ಮಂದಿ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ಆರನೇ ಹಂತದ ಮಾತುಕತೆ ನಡೆಯುತ್ತಿದೆ.

