ನವದೆಹಲಿ: ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ1955ರ ಅಡಿಯಲ್ಲಿ ಅಕ್ರಮ ವಾಹನ ಜಪ್ತಿಗೆ ಸಂಬಂಧಿಸಿ 4.75 ಲಕ್ಷ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.
ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ 1955ರ ಅಡಿಯಲ್ಲಿ ಅಕ್ರಮವಾಗಿ ಜಪ್ತಿ ಮಾಡಿದ ವಾಹನದ ಜಪ್ತಿ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
ಅಧಿಕಾರಿಗಳು ಉತ್ತರ ಪ್ರದೇಶದ ಹೊರಗೆ ಗೋಹತ್ಯೆಗಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂಬ ಊಹೆ ಮತ್ತು ಕಲ್ಪನೆಗಳ ಮೇಲೆ ಅಧಿಕಾರಿಗಳು ಕ್ರಮವನ್ನು ಕೈಗೊಂಡಿದ್ದಾರೆ ಎಂದು ನ್ಯಾಯಮೂರ್ತಿ ಸಂದೀಪ್ ಜೈನ್ ಅವರ ಪೀಠವು ಗಮನಿಸಿದೆ. ಊಹೆ, ಸಾಕ್ಷ್ಯವಲ್ಲ ಎಂದು ಹೇಳಿದೆ.
2024ರ ಸೆಪ್ಟೆಂಬರ್ 19ರಂದು ಚಂದೌಲಿ ಜಿಲ್ಲೆಯ ಸಹಬ್ಗಂಜ್ ಪೊಲೀಸರು ಟಾಟಾ ಏಸ್ ವಾಹನವನ್ನು ತಡೆದಿದ್ದರು. ಉತ್ತರ ಪ್ರದೇಶದಿಂದ ಬಿಹಾರಕ್ಕೆ ವಧೆಗಾಗಿ ಗೋವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ವಾಹನದ ಮಾಲಕ ವಿನೋದ್ ಕುಮಾರ್ ಸಿಂಗ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ವಿನೋದ್ ಕುಮಾರ್ ಸಿಂಗ್ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ನಾನು ಸ್ಥಳೀಯವಾಗಿ ಒಂದು ಹಸು ಮತ್ತು ಒಂದು ಕರುವನ್ನು ಸಾಗಿಸುತ್ತಿದ್ದೆ. ಆದರೆ ಲಂಚ ನೀಡಲು ನಿರಾಕರಿಸಿದ ಬಳಿಕ ಪೊಲೀಸರು ಮೂರು ಜಾನುವಾರು ಪತ್ತೆಯಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದರು.

