ಶ್ರೀಕಾಕುಳಂ: ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿರುವ ಈ ಸಂದರ್ಭದಲ್ಲಿ, ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿರುವ 'ಗಾಂಧಿ ಮಂದಿರಂ' ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಸವಿನೆನಪನ್ನು ಜೀವಂತವಾಗಿರಿಸಿರುವ ತಾಣವಾಗಿ ಮತ್ತೆ ಗಮನ ಸೆಳೆದಿದೆ.
ಹೆಚ್ಚಿನ ಕಡೆಗಳಲ್ಲಿ ಮಹಾತ್ಮ ಗಾಂಧೀಜಿಯವರನ್ನು ಪ್ರತಿಮೆ ಅಥವಾ ಸ್ಮಾರಕಗಳ ಮೂಲಕ ಸ್ಮರಿಸಲಾಗುತ್ತದೆ. ಆದರೆ, ಶ್ರೀಕಾಕುಳಂನ ಜನರು ಬಾಪೂಜಿಗಾಗಿ ದೇವಾಲಯವನ್ನೇ ನಿರ್ಮಿಸಿದ್ದಾರೆ.
ಇಲ್ಲಿನ ಶಾಂತಿ ನಗರ ಕಾಲೋನಿಯಲ್ಲಿರುವ 'ಗಾಂಧಿ ಮಂದಿರಂ' ಮಹಾತ್ಮ ಗಾಂಧಿ, ಸ್ವಾತಂತ್ರ್ಯ ಚಳವಳಿ ಮತ್ತು ಅವರು ಎತ್ತಿ ಹಿಡಿದ ಮೌಲ್ಯಗಳನ್ನು ಸ್ಮರಿಸುವ ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.
ಶ್ರೀಕಾಕುಳಂನೊಂದಿಗೆ ಗಾಂಧೀಜಿಯವರ ಒಡನಾಟವು 1927ರ ಡಿಸೆಂಬರ್ನಲ್ಲಿ ಆರಂಭವಾಗಿತ್ತು. ಆ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಅವರು, ಹಲವು ದಿನಗಳ ಕಾಲ ಇಲ್ಲಿದ್ದು ಜನರನ್ನು ಭೇಟಿಯಾಗಿ ಸ್ವಾತಂತ್ರ್ಯ ಸಂಗ್ರಾಮದ ಸಂದೇಶವನ್ನು ಸಾರಿದ್ದರು.
ಮಹಾತ್ಮ ಗಾಂಧಿಯವರ ಸಂದೇಶ ಹಾಗೂ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಗಾಂಧಿ ಮಂದಿರವನ್ನು ಅಭಿವೃದ್ಧಿಪಡಿಸಲಾಗಿದೆ. ಸುಮಾರು 50 ಎಕರೆ ವಿಸ್ತೀರ್ಣದ ಉದ್ಯಾನವನದಲ್ಲಿ ಗಾಂಧಿ ಮಂದಿರ ತಲೆ ಎತ್ತಿದೆ. ಇದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರ ನೆನಪಿಗಾಗಿ 'ಸ್ಫೂರ್ತಿ ವನ'ವನ್ನೂ ನಿರ್ಮಿಸಲಾಗಿದೆ.
ದೇವಾಲಯದ ಒಳಗೆ ಮಹಾತ್ಮ ಗಾಂಧೀಜಿಯವರ ಧ್ಯಾನಸ್ಥ ಭಂಗಿಯ ಮೂರ್ತಿಯಿದೆ. ಮಂದಿರದ ಸುತ್ತಲೂ ಅವರ ಜೀವನದ ಪ್ರಮುಖ ಘಟನಾವಳಿಗಳು ಮತ್ತು ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನು ಕೆತ್ತಲಾಗಿದೆ. ಗಾಂಧೀಜಿಯವರು ರಾಟೆಯಿಂದ ನೂಲು ತೆಗೆಯುವ ದೃಶ್ಯ ಹಾಗೂ ರಾಷ್ಟ್ರೀಯ ಚಳವಳಿಗೆ ಸಂಬಂಧಿಸಿದ ಪ್ರಮುಖ ಚಿಹ್ನೆಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.
ಇಲ್ಲಿರುವ ಸ್ಫೂರ್ತಿ ವನದಲ್ಲಿ 35 ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಐವರು ಸಮಾಜ ಸುಧಾರಕರ ಪ್ರತಿಮೆಗಳಿವೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮತ್ತು ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಮಹನೀಯರ ಬಗ್ಗೆ ತಿಳಿಯಲು ಇದು ಪ್ರವಾಸಿಗರಿಗೆ ನೆರವಾಗುತ್ತದೆ.
ಆವರಣದಲ್ಲಿ 105 ಅಡಿ ಎತ್ತರದಲ್ಲಿ ರಾರಾಜಿಸುವ ಬೃಹತ್ ರಾಷ್ಟ್ರಧ್ವಜವು ಈ ಸಮಯದಲ್ಲಿ ದೇಶಭಕ್ತಿಯ ವಾತಾವರಣವನ್ನು ಇಮ್ಮಡಿಗೊಳಿಸುತ್ತದೆ. ಹಸಿರಿನಿಂದ ಕಂಗೊಳಿಸುವ ಉದ್ಯಾನವನದಲ್ಲಿ ಜನರು ಸ್ವಾತಂತ್ರ್ಯ ಹೋರಾಟದ ಸವಿನೆನಪುಗಳನ್ನು ಸ್ಮರಿಸುತ್ತಾ ಸಮಯ ಕಳೆಯುತ್ತಾರೆ
ಶ್ರೀಕಾಕುಳಂನ ಜನರಿಗೆ ಈ ದೇವಾಲಯವು ಕೇವಲ ಒಂದು ಕಟ್ಟಡವಲ್ಲ. ಅದು ಬಾಪೂಜಿ ಹಾಗೂ ಸ್ವತಂತ್ರ ಭಾರತದ ಕನಸು ಕಂಡ ಲಕ್ಷಾಂತರ ಜನರ ತ್ಯಾಗದ ಸಂಕೇತ. ಕರಾವಳಿ ಜಿಲ್ಲೆಯೊಂದಿಗೆ ರಾಷ್ಟ್ರಪಿತನಿಗಿದ್ದ ಬಾಂಧವ್ಯವನ್ನು ನೆನೆಯುತ್ತಾ ಸ್ಥಳೀಯರು ಇಲ್ಲಿಗೆ ಭೇಟಿ ನೀಡುತ್ತಾರೆ.

