ವಿಶ್ವಸಂಸ್ಥೆ: 'ಕಳೆದ ವರ್ಷ ನವೆಂಬರ್ನಲ್ಲಿ ನವದೆಹಲಿಯ ಕೆಂಪು ಕೋಟೆ ಬಳಿ ನಡೆದ ಭಯೋತ್ಪಾದಕ ದಾಳಿಗೆ ಭಾರತ ಉಪಖಂಡದಲ್ಲಿ ಅಲ್-ಕೈದಾ (ಎಕ್ಯುಐಎಸ್) ಸಂಘಟನೆ ಕಾರಣ' ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ನಿರ್ಬಂಧಗಳ ಉಸ್ತುವಾರಿ ಸಮಿತಿಯ ಹೊಸ ವರದಿ ತಿಳಿಸಿದೆ.
ಸೋಮವಾರ ಪ್ರಕಟವಾದ ವರದಿಯಲ್ಲಿ, 'ಎಕ್ಯುಐಎಸ್ ಸಂಘಟನೆಯು ಸಣ್ಣ ಗುಂಪುಗಳಾಗಿ ವಿಭಜನೆಗೊಂಡು ಪ್ರಾದೇಶಿಕ ಭಯೋತ್ಪಾದಕ ಸಂಸ್ಥೆಯಾಗಿ ಬೆಳೆಯುತ್ತಾ ಸಾಗಿದೆ' ಎಂದು ಉಲ್ಲೇಖಿಸಲಾಗಿದೆ.
'ಎಕ್ಯುಐಎಸ್ ದೊಡ್ಡ ಘಟಕಗಳಾಗಿ ಕೆಲಸ ಮಾಡುವ ಬದಲು ಸಣ್ಣ ಗುಂಪುಗಳಾಗಿ ಕಾರ್ಯನಿರ್ವಹಿಸುತ್ತಾ, ಲಾಜಿಸ್ಟಿಕ್ಸ್ ಮತ್ತು ಹಣಕಾಸಿನ ಜಾಲಗಳನ್ನು ಸ್ಥಾಪಿಸಿಕೊಂಡಿದೆ' ಎಂದು ವರದಿ ಹೇಳಿದೆ.
'ಬಾಂಗ್ಲಾದೇಶದಲ್ಲಿ ತನ್ನ ನೆಲೆಗಳನ್ನು ಸ್ಥಾಪಿಸಲು ಎಕ್ಯುಐಎಸ್ ಅಲ್ಲಿನ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ' ಎಂದು ತಿಳಿಸಿದೆ.
'ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅಲ್ ಕೈದಾ ಮತ್ತು ಐಎಸ್ಐಎಲ್ (ದಾಯೆಶ್) ಭಯೋತ್ಪಾದಕ ಸಂಘಟನೆಗಳು ಹಲವು ವರ್ಷಗಳಿಂದ ನಿರಂತರವಾಗಿ ಆಸಕ್ತಿ ತೋರಿಸಿವೆ. ಆದರೆ, ಇದುವರೆಗೆ ಅದಕ್ಕೆ ಸಂಬಂಧಿಸಿದ ತಾಂತ್ರಿಕ ಸವಾಲುಗಳನ್ನು ಜಯಿಸಲು ಅವು ವಿಫಲವಾಗಿವೆ. ಆದರೆ, ಇಂತಹ ಶಸ್ತ್ರಾಸ್ತ್ರಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆ ಆನ್ಲೈನ್ ಭಯೋತ್ಪಾದಕ ಸಮುದಾಯಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ' ಎಂದು ಹೇಳಿದೆ.
ಕೆಂಪು ಕೋಟೆ ಪ್ರದೇಶದಲ್ಲಿ ನಡೆದಿದ್ದ ಕಾರು ಬಾಂಬ್ ಸ್ಫೋಟದಲ್ಲಿ 15 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

