ನವದೆಹಲಿ: ಕಾಣೆಯಾದ ಮತ್ತು ರಕ್ಷಿಸಲ್ಪಟ್ಟ ಮಕ್ಕಳನ್ನು ವೈಜ್ಞಾನಿಕವಾಗಿ ಗುರುತಿಸಲು ಮತ್ತು ಅವರನ್ನು ಕುಟುಂಬದೊಂದಿಗೆ ಮರುಸೇರ್ಪಡೆಗೊಳಿಸಲು ಡಿಎನ್ಎ ಪರೀಕ್ಷೆ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರ ಮತ್ತು ಎನ್ಸಿಪಿಸಿಆರ್ಗೆ ನೋಟಿಸ್ ಜಾರಿ ಮಾಡಿದೆ.
ದೀಪಕ್ ಕನ್ಸಲ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (ಎನ್ಸಿಪಿಸಿಆರ್) ನೋಟಿಸ್ ಜಾರಿ ಮಾಡಿದೆ.
ಕಾಣೆಯಾದ ಮತ್ತು ರಕ್ಷಿಸಲ್ಪಟ್ಟ ಮಕ್ಕಳ ಡಿಎನ್ಎ ಪರೀಕ್ಷೆ ಮತ್ತು ಬಯೋಮೆಟ್ರಿಕ್ ಗುರುತಿಸುವಿಕೆಗಾಗಿ ಶಾಸನಬದ್ಧ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಹಾಗೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಗುರುತಿಸಲಾಗದ ಮಕ್ಕಳು ಹಾಗೂ ಕಾಣೆಯಾದ ಮಕ್ಕಳ ಜೈವಿಕ ಪೋಷಕರು, ಪೋಷಕರ ಡಿಎನ್ಎ ಮಾದರಿ ಸಂಗ್ರಹಣೆಯನ್ನು ಕಡ್ಡಾಯಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಪೊಲೀಸ್ ದಾಖಲೆ, ಆಶ್ರಯ ತಾಣಗಳು, ಬಾಲ ನ್ಯಾಯ ಮಂಡಳಿ ಮತ್ತು ಮಾನವ ಅಕ್ರಮ ಸಾಗಣೆ ತಡೆ ಘಟಕ ಸೇರಿದಂತೆ ಪ್ರಸ್ತುತ ಇರುವ ಎಲ್ಲಾ ಮಕ್ಕಳ ದತ್ತಾಂಶಗಳನ್ನು ಕೇಂದ್ರೀಕೃತ ಹಾಗೂ ರಿಯಲ್-ಟೈಮ್ ರಾಷ್ಟ್ರೀಯ ಚೌಕಟ್ಟಿನಡಿಯಲ್ಲಿ ಸಂಯೋಜಿಸಲು ಮತ್ತು ಪರಸ್ಪರ ಕಾರ್ಯನಿರ್ವಹಿಸುವಂತೆ ಮಾಡಲು ನಿರ್ದೇಶಿಸಬೇಕು ಎಂದೂ ಅರ್ಜಿನಲ್ಲಿ ಮನವಿ ಮಾಡಲಾಗಿದೆ.
ಕಾಣೆಯಾದ ಮತ್ತು ಅಕ್ರಮ ಸಾಗಣೆಗೆ ಒಳಗಾದ ಮಕ್ಕಳ ಕುರಿತಾದ ತನಿಖೆ, ರಕ್ಷಣೆ ಮತ್ತು ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮಕ್ಕಳ ರಕ್ಷಣೆ, ಮಾನವ ಅಕ್ರಮ ಸಾಗಣೆ ತಡೆ ಕಾರ್ಯಪಡೆಯನ್ನು ರಚಿಸಲು ನಿರ್ದೇಶನ ನೀಡುವಂತೆಯೂ ಕೋರಲಾಗಿದೆ.
ರಕ್ಷಿಸಲ್ಪಟ್ಟ ಮಕ್ಕಳ ಪತ್ತೆಹಚ್ಚುವಿಕೆ, ಡಿಎನ್ಎ ಪರೀಕ್ಷೆ, ಕುಟುಂಬದೊಂದಿಗೆ ಮರುಸೇರ್ಪಡೆ, ಪುನರ್ವಸತಿ, ಪರಿಹಾರ ಮತ್ತು ದೀರ್ಘಕಾಲೀನ ಮೇಲ್ವಿಚಾರಣೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (ಎಸ್ಒಪಿ) ರೂಪಿಸುವಂತೆಯೂ ಮನವಿ ಮಾಡಲಾಗಿದೆ.
ಖಾಸಗಿತನದ ನಿಯಮಗಳಿಗೆ ಬದ್ಧವಾಗಿ, ದತ್ತು ಪ್ರಕ್ರಿಯೆಯು ಪೂರ್ಣಗೊಳ್ಳುವ ಮೊದಲು ದತ್ತು ಪಡೆಯಲು ಪ್ರಸ್ತಾವಿಸಲಾದ ಮಗುವಿನ ಡಿಎನ್ಎ ಪರಿಶೀಲನೆಯನ್ನು ರಾಷ್ಟ್ರೀಯ ದಾಖಲೆಗಳೊಂದಿಗೆ ಕಡ್ಡಾಯಗೊಳಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.
ಇದರಿಂದ ಮಗುವಿನ ಗುರುತಿನ ಸತ್ಯಾಸತ್ಯತೆಯನ್ನು ತಿಳಿಯಲು ಸಹಾಯ ಮಾಡುತ್ತದೆ ಮತ್ತು ಕಾನೂನುಬಾಹಿರ ದತ್ತು, ಅಕ್ರಮ ಸಾಗಣೆ ಹಾಗೂ ತಪ್ಪು ಮಾಹಿತಿ ನೀಡುವುದನ್ನು ತಡೆಯುತ್ತದೆ.
ಇದರ ಜೊತೆಗೆ, ಕಾಣೆಯಾದ ಮಕ್ಕಳ ಸಂಖ್ಯೆ, ಸಂಗ್ರಹಿಸಿದ ಡಿಎನ್ಎ ಮಾದರಿ, ತಾಳೆಯಾದ ಪ್ರಕರಣಗಳು, ಪೂರ್ಣಗೊಂಡ ಮರುಸೇರ್ಪಡೆ, ದಾಖಲಾದ ಮೊಕದ್ದಮೆಗಳು ಮತ್ತು ಕೈಗೊಂಡ ಪುನರ್ವಸತಿ ಕ್ರಮಗಳ ವಿವರಗಳನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

