ಗುವಾಹಾಟಿ: ಅಸ್ಸಾಂನ ಕಾಝಿರಂಗ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲು ಉದ್ದೇಶಿಸಿರುವ ಪಂಚತಾರಾ ಹೋಟೆಲ್ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಪಡೆದ ಮರುದಿನವೇ , ಮೂಲನಿವಾಸಿಗಳ ಹಕ್ಕುಗಳ ಹೋರಾಟಗಾರ ಪ್ರಣಬ್ ಡೋಲೆ ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯ (NSA) ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಜೂನ್ ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಣಬ್ ಡೋಲೆ ಅವರು ಜುಲೈ 13 ರಂದು ಗುವಾಹಟಿಯಲ್ಲಿ ಬಂಧನಕ್ಕೊಳಗಾಗಿದ್ದರು. ಗೋಲಾಘಾಟ್ ಜಿಲ್ಲಾ ಕಾರಾಗೃಹದಲ್ಲಿದ್ದ ಅವರಿಗೆ ಬುಧವಾರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
ಆದರೆ, ರಾಜ್ಯ ಸರ್ಕಾರವು ಗುರುವಾರ ಅವರ ವಿರುದ್ಧ ಎನ್ಎಸ್ಎ ಕಾಯ್ದೆಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದು , ಅವರು ಅದೇ ಜೈಲಿನಲ್ಲಿ ಬಂಧಿಯಾಗಿರುವುದನ್ನು ಮುಂದುವರಿಸಿದೆ.
"ಡೋಲೆ ಅವರ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಜ್ಯದ ಭದ್ರತೆಗೆ ಧಕ್ಕೆ ತರುವಂತಿವೆ ಎಂದು ಸರಕಾರಕ್ಕೆ ಮನವರಿಕೆಯಾಗಿದೆ. ಅವರನ್ನು ಬಿಡುಗಡೆ ಮಾಡಿದರೆ ಅಂತಹ ಚಟುವಟಿಕೆಗಳನ್ನು ಮುಂದುವರಿಸುವ ನೈಜ ಮತ್ತು ತಕ್ಷಣದ ಸಾಧ್ಯತೆ ಇದೆ" ಎಂದು ರಾಜಕೀಯ (ಎ) ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 3(2)ರ ಅಡಿಯಲ್ಲಿ ಹೊರಡಿಸಲಾದ ಈ ಆದೇಶದಲ್ಲಿ ಮುನ್ನೆಚ್ಚರಿಕೆಯ ಬಂಧನ ಅಗತ್ಯ ಎಂದು ಉಲ್ಲೇಖಿಸಲಾಗಿದ್ದು , ಡೋಲೆ ಅವರನ್ನು ವಶಕ್ಕೆ ಪಡೆದು ಗೋಲಾಘಾಟ್ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡಲು ನಿರ್ದೇಶಿಸಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕಾಝಿರಂಗ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲು ಉದ್ದೇಶಿಸಿರುವ ಪಂಚತಾರಾ ಹೋಟೆಲ್ ಯೋಜನೆಯು ಈ ಪ್ರದೇಶದ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ತರುತ್ತದೆ ಎಂದು ಅದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಗಳಲ್ಲಿ ಡೋಲೆ ಅವರು ಮುಂಚೂಣಿಯಲ್ಲಿದ್ದರು. ರೈತ ಹಕ್ಕುಗಳ ಹೋರಾಟಗಾರರೂ ಆಗಿರುವ ಡೋಲೆ, ಎಪ್ರಿಲ್ ನ ವಿಧಾನಸಭೆಯ ಚುನಾವಣೆಯಲ್ಲಿ ಬೊಕಾಖಾಟ್ ಕ್ಷೇತ್ರದಿಂದ ಅಸ್ಸಾಂ ಗಣ ಪರಿಷತ್ ಅಧ್ಯಕ್ಷ ಹಾಗೂ ರಾಜ್ಯ ಸಂಪುಟ ಸಚಿವರಾದ ಅತುಲ್ ಬೋರಾ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು.

