ಮುಂಬೈ: ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಸದಸ್ಯರಾಗಿದ್ದರು ಎಂದು ವಿ.ಡಿ. ಸಾವರ್ಕರ್ ಮೊಮ್ಮಗ ಸತ್ಯಕಿ ಸಾವರ್ಕರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ವಿರುದ್ಧದ ಮಾನನಷ್ಟ ಪ್ರಕರಣದ ವಿಚಾರಣೆ ವೇಳೆ ಪ್ರತಿವಾದಿ ವಕೀಲರ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಮಾತನಾಡಿದ ಸತ್ಯಕಿ ಸಾವರ್ಕರ್, ನಾಥೂರಾಮ್ ಗೋಡ್ಸೆ ಮತ್ತು ಅವರ ಸಹೋದರ ಗೋಪಾಲ್ ಗೋಡ್ಸೆ ಅವರು ಆರ್ಎಸ್ಎಸ್ನ ಸಕ್ರಿಯ ಸದಸ್ಯರಾಗಿದ್ದರು ಎಂದು ಹೇಳಿದ್ದರು.
ಸತ್ಯಕಿ ಸಾವರ್ಕರ್ ಅವರ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆರ್ಎಸ್ಎಸ್ಗೆ ಕಾಂಗ್ರೆಸ್ ಒತ್ತಾಯಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, 'ಗಾಂಧಿ ಅವರ ಹತ್ಯೆಯಾದ ನಂತರದಿಂದಲೂ, ಗೋಡ್ಸೆ ಸಹೋದರರೊಂದಿಗೆ ತಮಗೆ ಯಾವುದೇ ನಂಟಿಲ್ಲ ಎಂದು ಆರ್ಎಸ್ಎಸ್ ಪ್ರತಿಪಾದಿಸುತ್ತಿದೆ. ಆದರೆ, ಇದೀಗ ಸತ್ಯಕಿ ಸಾವರ್ಕರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಹಾಗಾದರೆ ಆರ್ಎಸ್ಎಸ್ ಜನರಿಗೆ ಸುಳ್ಳು ಹೇಳಿದೆಯಾ? ಇದಕ್ಕೆ ಅವರು ಉತ್ತರಿಸಲೇಬೇಕು' ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ 1948ರ ಸೆಪ್ಟೆಂಬರ್ 11ರಂದು ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ಎಂ.ಎಸ್. ಗೋಲ್ವಲ್ಕರ್ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿರುವ ಸಚಿನ್ ಸಾವಂತ್, 'ಆ ಪತ್ರದಲ್ಲಿ, ಗಾಂಧಿ ಹತ್ಯೆಯ ನಂತರ ಆರ್ಎಸ್ಎಸ್ ಸದಸ್ಯರು ಸಿಹಿ ಹಂಚಿದ್ದರಿಂದ ಗಲಾಟೆಗಳು ಆರಂಭವಾಯಿತು ಎಂದು ಪಟೇಲರು ಬರೆದಿದ್ದರು' ಎಂದು ಹೇಳಿದ್ದಾರೆ.
ಲಂಡನ್ನಲ್ಲಿ ಭಾಷಣವೊಂದರ ವೇಳೆ ವಿ.ಡಿ. ಸಾವರ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ, ರಾಹುಲ್ ಗಾಂಧಿ ವಿರುದ್ಧ ಸತ್ಯಕಿ ಸಾವರ್ಕರ್ ಅವರು 2023ರಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

