ನವದೆಹಲಿ: ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಮೊದಲ 10 ದಿನಗಳಲ್ಲಿ, 17 ನಗರಗಳಲ್ಲಿ ಸುಮಾರು 4,000 ಟನ್ ಕಾಪು ದಾಸ್ತಾನಿನ ಈರುಳ್ಳಿ ಮಾರಾಟ ಮಾಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಭಾನುವಾರ(ಸೆ.6) ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಏಜೆನ್ಸಿಗಳಾದ ಎನ್ಸಿಸಿಎಫ್ ಮತ್ತು ನಾಫೆಡ್ ಮೂಲಕ 2026ರ ಸಾಲಿನಲ್ಲಿ 1.21 ಲಕ್ಷ ಟನ್ ಈರುಳ್ಳಿಯ ಕಾಪು ದಾಸ್ತಾನು ಹೊಂದಿದೆ. ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಏಜೆನ್ಸಿಗಳು ಸಂಗ್ರಹಿಸಿದ ಈರುಳ್ಳಿಯನ್ನು 'ಕಾಂದಾ ಎಕ್ಸ್ಪ್ರೆಸ್' ವಿಶೇಷ ರೈಲು ಮತ್ತು ಟ್ರಕ್ಗಳ ಮೂಲಕ ವಿವಿಧ ಕಡೆಗಳಿಗೆ ಸಾಗಿಸಲಾಗುತ್ತಿದೆ.
ಪ್ರಮುಖ ನಗರಗಳಲ್ಲಿ ಪ್ರತಿ ಕೆ.ಜಿಗೆ ₹35ರಂತೆ ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಇದುವರೆಗೆ 17 ನಗರಗಳಲ್ಲಿ ಸುಮಾರು 4,000 ಟನ್ ಈರುಳ್ಳಿಯ ಕಾಪು ದಾಸ್ತಾನನ್ನು ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಂದಾ ಎಕ್ಸ್ಪ್ರೆಸ್ ಮೂಲಕ ದೆಹಲಿ ಮತ್ತು ಚೆನ್ನೈಗೆ ಈಗಾಗಲೇ ದೊಡ್ಡ ಪ್ರಮಾಣದ ಈರುಳ್ಳಿ ತಲುಪಿದ್ದು, ಮುಂಬರುವ ದಿನಗಳಲ್ಲಿ ಗುವಾಹಟಿಗೆ ಕಳುಹಿಸಲಾಗುತ್ತದೆ. ಇದರಿಂದಾಗಿ ಬೆಲೆ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಎನ್ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನಿಸ್ ಜೋಸೆಫ್ ಚಂದ್ರ, 'ನಾವು ದೇಶದಾದ್ಯಂತ ವಿವಿಧ ನಗರಗಳಲ್ಲಿ ಇದುವರೆಗೆ 1,500 ಟನ್ ಈರುಳ್ಳಿಯ ಕಾಪು ದಾಸ್ತಾನನ್ನು ಮಾರಾಟ ಮಾಡಿದ್ದೇವೆ. ರಿಯಾಯಿತಿ ದರದ ಮಾರಾಟದಿಂದಾಗಿ ಪ್ರತಿ ಕೆಜಿಗೆ ₹2-₹3 ಇಳಿಕೆಯಾಗಿದೆ. ಹಲವಾರು ರಾಜ್ಯ ಸರ್ಕಾರಗಳು ಈ ಯೋಜನೆಯಲ್ಲಿ ಆಸಕ್ತಿ ತೋರಿಸಿವೆ. ಪ್ರಸ್ತುತ ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಪಂಜಾಬ್ನಲ್ಲಿ ಮಾರಾಟ ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ
ಗ್ರಾಹಕ ವ್ಯವಹಾರಗಳ ಇಲಾಖೆಯ ಮಾಹಿತಿಯ ಪ್ರಕಾರ, ಆ.28ರಂದು ಈರುಳ್ಳಿಯ ರಿಯಾಯಿತಿ ಮಾರಾಟ ಪ್ರಾರಂಭವಾದಾಗ ಸರಾಸರಿ ಬೆಲೆ ಕೆ.ಜಿಗೆ ₹48.5 ಇದ್ದದ್ದು, ಇದೀಗ ₹50.79ಕ್ಕೆ ಏರಿಕೆಯಾಗಿದೆ.

