HEALTH TIPS

ಯಾವುದೇ ಪಕ್ಷವನ್ನು ಕುರುಡಾಗಿ ಹಿಂಬಾಲಿಸಬೇಡಿ: ಮುಸ್ಲಿಮರಿಗೆ ಪ್ರಶಾಂತ್ ಕಿಶೋರ್

ಪಾಟ್ನಾ: ಮುಸ್ಲಿಮರು ಯಾವುದೇ ಪಕ್ಷದ ಹಿಂಬಾಲಕರಾಗದೆ, ತಮ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಮತ್ತು ಹಕ್ಕಿಗಾಗಿ ಹೋರಾಡಬೇಕು ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಕರೆ ನೀಡಿದ್ದಾರೆ. 


ರಾಜಧಾನಿಯ ಸಬ್ಜಿಬಾಗ್‌ನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, 'ಯಾವುದೇ ಪಕ್ಷವನ್ನು ಕುರುಡಾಗಿ ಹಿಂಬಾಲಿಸುವ ಬದಲು, ರಾಜಕೀಯದಲ್ಲಿ ತಮ್ಮ ನ್ಯಾಯಯುತ ಪಾಲು ಮತ್ತು ಪ್ರಾತಿನಿಧ್ಯಕ್ಕಾಗಿ ಅಲ್ಪಸಂಖ್ಯಾತರು ಧ್ವನಿ ಎತ್ತಬೇಕು' ಎಂದರು.

ಇತ್ತೀಚಿನ ಬಾಂಕಿಪುರ ಉಪಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಮುಸ್ಲಿಂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಸಮುದಾಯದ ಭವಿಷ್ಯವನ್ನು ನಾಯಕರ ಭರವಸೆಗಳಿಗೆ ಮಾತ್ರ ಬಿಟ್ಟುಕೊಡದೆ ಸ್ವತಃ ಕಾಳಜಿ ವಹಿಸಬೇಕು ಎಂದು ಹೇಳಿದರು.

ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸಮುದಾಯಗಳು ಸ್ವತಃ ಕಾಳಜಿ ವಹಿಸಬೇಕು ಎಂದು ಕರೆ ನೀಡಿದ ಅವರು, ತಮ್ಮ ಸಮುದಾಯದ ಹಿತ ಕಾಯುವುದಾಗಿ ಹೇಳಿಕೊಳ್ಳುವ ನಾಯಕರ ಮಾತಿಗೆ ಮರುಳಾಗಬಾರದು ಎಂದರು.

ಬಿಜೆಪಿ ಸತತವಾಗಿ ಗೆಲ್ಲುತ್ತಿದ್ದ ಬಾಂಕಿಪುರ ಕ್ಷೇತ್ರವನ್ನು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಿಶೋರ್ ಗೆದ್ದಿದ್ದರು. ಈ ಹಿಂದೆ ಆರ್‌ಜೆಡಿಯ ಬೆಂಬಲಿಗರಾಗಿದ್ದ ನಗರದ ಮುಸ್ಲಿಂ ಮತದಾರರು ಕಿಶೋರ್ ಪರ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು ಎನ್ನಲಾಗಿದೆ.

ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂಟೂ ಸ್ಥಾನಗಳಲ್ಲೂ ಜನ ಸುರಾಜ್ ಸ್ಪರ್ಧಿಸಲಿದೆ ಎಂದು ಹೇಳಿದ ಕಿಶೋರ್, ಆರ್‌ಜೆಡಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನೂ ಟೀಕಿಸಿದರು. 'ಪಟ್ಟಿಯಲ್ಲಿ ಪಕ್ಷ ಬದಲಿಸಿ ಬಂದವರೇ ಹೆಚ್ಚಿದ್ದಾರೆ. ಹಣ ನೀಡಿದವರಿಗೆ ಟಿಕೆಟ್ ನೀಡಿದಂತಿದೆ' ಎಂದು ಅವರು ಆರೋಪಿಸಿದರು.

ನಿತೀಶ್ ಕುಮಾರ್ ಅವರ ಜನ್ಮಸ್ಥಳ ಬಖ್ತಿಯಾರ್‌ಪುರಕ್ಕೆ ಅವರ ಹೆಸರಿಡಬೇಕು ಎಂಬ ಪ್ರಸ್ತಾವವನ್ನೂ ಟೀಕಿಸಿದ ಕಿಶೋರ್, 'ಬಿಹಾರದಲ್ಲಿ ಈಗ ಅಭಿವೃದ್ಧಿ ಕೆಲಸಗಳಿಗಿಂತ ಸ್ಥಳಗಳ ಹೆಸರು ಬದಲಿಸುವ ವಿಚಾರದ ಸದ್ದು ಹೆಚ್ಚಾಗಲಿದೆ' ಎಂದರು.

ಜೆಡಿಯು ಹೆಸರನ್ನು 'ಜೆಡಿಯು-ನಿತೀಶ್' ಎಂದು ಬದಲಿಸುವ ಚರ್ಚೆ ಕುರಿತು ಅವರು, 'ಹೆಸರು ಏನೇ ಇರಲಿ, ಇಂದಿನ ವಾಸ್ತವವೆಂದರೆ ಪಕ್ಷವನ್ನು ನಿತೀಶ್ ಕುಮಾರ್ ನಡೆಸುತ್ತಿಲ್ಲ; ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸುತ್ತಿದ್ದಾರೆ' ಎಂದು ಆರೋಪಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries