ಲಂಡನ್: ಲಂಡನ್ನ ಥೇಮ್ಸ್ ನದಿ ತೀರದಲ್ಲಿ ಭಾನುವಾರ ಇದೇ ಮೊದಲ ಬಾರಿಗೆ ಗಂಗಾ ಆರತಿ ನಡೆಯಿತು. ಈ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಭಾರತದ ಗಂಗಾ ತೀರದಲ್ಲಿ ನಡೆಯುವ ಪ್ರಸಿದ್ಧ ಆರತಿಯ ಪರಂಪರೆಯನ್ನು ಲಂಡನ್ನಲ್ಲಿ ಪರಿಚಯಿಸುವ ಉದ್ದೇಶದಿಂದ ಚಿನ್ಮಯ ಮಿಷನ್ ಯುಕೆ, ವಾರ್ಷಿಕ 'ಟೋಟಲಿ ಥೇಮ್ಸ್' ಉತ್ಸವದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಿನ್ಮಯ ಮಿಷನ್ನ 75ನೇ ವರ್ಷಾಚರಣೆಯ ಅಂಗವಾಗಿ ಕಾರ್ಯಕ್ರಮ ನಡೆಯಿತು.
ಗಂಗಾ ತೀರದಲ್ಲಿ ತಲೆಮಾರುಗಳಿಂದ ಜನರು ನದಿಗೂ, ಪ್ರಕೃತಿಗೂ ಮತ್ತು ನಮ್ಮ ಬದುಕಿಗೆ ಆಧಾರವಾಗಿರುವ ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸುತ್ತಾ ಆರತಿ ಮಾಡುತ್ತಾ ಬಂದಿದ್ದಾರೆ. ಥೇಮ್ಸ್ ತೀರದಲ್ಲಿನ ಈ ಆರತಿಯೂ ಅದೇ ಭಾವನೆಯನ್ನು ಮೂಡಿಸುವ ಪ್ರಯತ್ನ. ಈ ಆರತಿ ಜನರನ್ನು ಒಂದೆಡೆ ಸೇರಿಸಿ, ಕೃತಜ್ಞತೆ, ಭರವಸೆ ಮತ್ತು ಒಗ್ಗಟ್ಟಿನ ಭಾವನೆಯನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸುತ್ತದೆ' ಎಂದು ಚಿನ್ಮಯ ಮಿಷನ್ ಯುಕೆ ನಿವಾಸಿ ಶಿಕ್ಷಕಿ ಬ್ರಹ್ಮಚಾರಿಣಿ ಶ್ರೀಪ್ರಿಯಾ ಚೈತನ್ಯ ಹೇಳಿದರು.
ಚಿನ್ಮಯ ಮಿಷನ್ಗೆ ಗಂಗೆಯು ಕೇವಲ ಪವಿತ್ರ ನದಿಯಲ್ಲ, ಜ್ಞಾನದ ನಿರಂತರ ಹರಿವಿನ ಸಂಕೇತವೂ ಹೌದು ಎಂದು ಅವರು ವಿವರಿಸಿದರು.
'ನಮ್ಮ ಸಂಸ್ಥಾಪಕ ಸ್ವಾಮಿ ಚಿನ್ಮಯಾನಂದರು ವೇದಾಂತದ ಶಾಶ್ವತ ಜ್ಞಾನವನ್ನು ಹಿಮಾಲಯದಿಂದ ಜನಸಾಮಾನ್ಯರ ದೈನಂದಿನ ಬದುಕಿಗೆ ತಲುಪಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದರು. ಚಿನ್ಮಯ ಮಿಷನ್ 75ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಗಡಿ-ಭಾಷೆಗಳನ್ನೂ ಮೀರಿ ಹರಿಯುವ ಜ್ಞಾನ, ಸೇವೆ ಮತ್ತು ಕೃತಜ್ಞತೆಯ ಪರಂಪರೆಯನ್ನು ಸ್ಮರಿಸುವ ಸಂದರ್ಭವೂ ಇದಾಗಿದೆ' ಎಂದರು.
ಪರಿಸರದ ಕಾಳಜಿ ಹಿನ್ನೆಲೆಯಲ್ಲಿ ಥೇಮ್ಸ್ ನದಿಗೆ ಯಾವುದೇ ಹಾನಿಯಾಗದಂತೆ ಆರತಿಯನ್ನು ನದಿ ತೀರದಲ್ಲೇ ನಡೆಸಲಾಯಿತು. ಆಚರಣೆಯ ಯಾವುದೇ ವಸ್ತುವನ್ನು ನದಿಗೆ ಹಾಕುವುದೋ, ನೀರಿನಲ್ಲಿ ಬಿಡುವುದೋ ಮಾಡಲಿಲ್ಲ.
'ದೀಪಗಳನ್ನು ನೀರಿನಲ್ಲಿ ತೇಲಿ ಬಿಡುವ ಬದಲು ನದಿ ತೀರದಲ್ಲೇ ಇಡಲಾಯಿತು. ಹೀಗೆ ಪರಂಪರೆಯ ಆಶಯವನ್ನು ಗೌರವಿಸುವುದರ ಜೊತೆಗೆ ಥೇಮ್ಸ್ ನದಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ತ್ಯಾಜ್ಯ ಕಡಿಮೆ ಮಾಡುವುದು, ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವುದು ಸೇರಿದಂತೆ ಪರಿಸರದ ಮೇಲಿನ ಹೊರೆ ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ವಕ್ತಾರರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬ್ರಿಟನ್ನ ವಿವಿಧ ಹಿಂದೂ ಸಂಘಟನೆಗಳು ಮತ್ತು ಸಮುದಾಯಗಳ ಧಾರ್ಮಿಕ ಮುಖಂಡರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

