ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಜುಕೇಶನಲ್ ಟೆಕ್ನಾಲಜಿ (ಇ.ಟಿ.) ಕ್ಲಬ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗಾಗಿ ಚಲನಚಿತ್ರ ನಿರ್ಮಾಣ ಕಾರ್ಯಾಗಾರ ಜರಗಿತು.
ಕಾರ್ಯಕ್ರಮವನ್ನು ಸಾಹಿತಿ ಹಾಗೂ ರಂಗ ಕಲಾವಿದ ದಿವಾಕರ ಬಲ್ಲಾಳ್ ಎ.ಬಿ. ಉದ್ಘಾಟಿಸಿದರು. ಶಾಲಾ ಪ್ರಬಂಧಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಖ್ಯಾತ ರಂಗ ನಿರ್ದೇಶಕ ಉದಯ ಸಾರಂಗ್ ಅವರು ಚಿತ್ರಕಥೆ ರಚನೆ, ನಿರ್ದೇಶನ, ಕಲೆ ಹಾಗೂ ಸಂಕಲನ (ಎಡಿಟಿಂಗ್) ಸೇರಿದಂತೆ ಚಲನಚಿತ್ರ ನಿರ್ಮಾಣದ ಪ್ರಮುಖ ಮಜಲುಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು. ಮತ್ತೋರ್ವ ರಂಗ ನಿರ್ದೇಶಕ ಶ್ರೀಧರ ಪುಣಿಯೂರು ಅವರು 'ಕ್ಯಾಮೆರಾ ಮುಂದೆ ನಟನೆ' ಎಂಬ ವಿಷಯದ ಕುರಿತು ವಿಶೇಷ ತರಗತಿ ನಡೆಸಿಕೊಟ್ಟರು.
ಶಾಲೆಯ ಹಿರಿಯ ಶಿಕ್ಷಕ ಕಿರಣ್ ಕೆ.ಎಸ್. ಶುಭಾಶಂಸನೆಗೈದರು. ಜಿಲ್ಲಾ ಮಟ್ಟದ ಇ.ಟಿ. ಕ್ಲಬ್ ಸಂಯೋಜಕಿ ಹಾಗೂ ಶಾಲಾ ಶಿಕ್ಷಕಿ ಅರುಣಾ ಕೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಕನ್ನಡ ಶಿಕ್ಷಕಿ ಸಾವಿತ್ರಿ ಎಂ. ವಂದಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಗಾನವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದ ಅಂಗವಾಗಿ ಶಾಲಾ ಮಕ್ಕಳ ನೂತನ ಚಲನಚಿತ್ರ ನಿರ್ಮಾಣದ ಸಿದ್ಧತೆಗಳು ಪ್ರಗತಿಯಲ್ಲಿವೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

.jpg)
.jpg)
