ಕುಂಬಳೆ: ತೆಪ್ಪೋತ್ಸವ ಪುನರಾರಂಭ ಸಹಿತ ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿರುವ ಸರೋವರ ಕ್ಷೇತ್ರ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯಲ್ಲಿ ಸುಸಜ್ಜಿತವಾದ ನೂತನ ಭೋಜನ ಶಾಲೆ ನಿರ್ಮಿಸಲು ಕರ್ನಾಟಕ ಬ್ಯಾಂಕ್ ಮುಂದಾಗಿದೆ. ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಕರ್ನಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಿರ್ಮಾಣವಾಗುವ ಭೋಜನಶಾಲೆಗೆ ಭಾನುವಾರ ಕ್ಷೇತ್ರದ ಪ್ರಧಾನ ಅರ್ಚಕ ವೇ. ಮೂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಶಿಲಾನ್ಯಾಸ ನಡೆಯಿತು.
ಶಿಲಾನ್ಯಾಸದ ಬಳಿಕ ಅನಂತಶ್ರೀ ಸಭಾಭವನದಲ್ಲಿ ನಡೆದ ಸಭೆಯನ್ನು ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ರಾಘವೇಂದ್ರ ಶ್ರೀನಿವಾಸ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ರಾಜ ಬಿ.ಎಸ್, ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಮಾತನಾಡಿದರು.
ಬ್ರಹ್ಮಕಲಶೋತ್ಸವದ ಮಹಾ ಪೋಷಕ, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ, ಡಾ. ರಾಜಗೋಪಾಲ ಕಾಸರಗೋಡು, ವಾರ್ಡು ಪ್ರತಿನಿಧಿ ಸತೀಶ ಪೆರ್ಣೆ, ಧಾರ್ಮಿಕ ಮುಂದಾಳು ಜಯದೇವ ಖಂಡಿಗೆ, ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ ದಯಾರಾಜ್, ಸುಂದರ ಇಂಜಿನಿಯರ್, ಶ್ಯಾಮಪ್ರಸಾದ ಸರಳಿ, ರಾಜಶೇಖರ ಮಾಸ್ತರ್, ಮಾಧವ ಕಾರಂತ ಹಾಗೂ ಕರ್ನಾಟಕ ಬ್ಯಾಂಕ್ ನ ನೀರ್ಚಾಲು, ಕಾಸರಗೋಡು ಶಾಖೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಶಂನಾಡಿಗ, ವಿಜಯಾ ಭಟ್ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶ ಸಮಿತಿ ಪ್ರ. ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಪೆರ್ಣೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಸತ್ಯಶಂಕರ ಅನಂತಪುರ ನಿರೂಪಿಸಿದರು. ಶಂನಾಡಿಗ ಕುಂಬ್ಳೆ ವಂದಿಸಿದರು.
2027 ಫೆ. 23ರಿಂದ 28 ರ ತನಕ ಜರಗಲಿರುವ ಬ್ರಹ್ಮಕಲಶೋತ್ಸವದ ವೇಳೆಗೆ ನೂತನ ಭೋಜನಶಾಲೆ ಕ್ಷೇತ್ರಕ್ಕೆ ಸಮರ್ಪಣೆಯಾಗಲಿದೆ.

.jpg)
.jpg)
.jpg)
