ಕಾಸರಗೋಡು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಹಾಗೂ ಧರ್ಮಾಧಿಕಾರಿ ಡಾ, ಡಿ. ವೀರೇಂದ್ರ ಹೆಗ್ಗಡೆ-ಶ್ರೀಮತಿ ಹೇಮಾವತಿ ಅಮ್ಮನವರ ಶುಭಾಶೀರ್ವಾದಗಳೊಂದಿಗೆ ಸೆಪ್ಟೆಂಬರ್ 28 ರಿಂದ ಒಕ್ಟೋಬರ್ 4ರ ವರೆಗೆ ಧರ್ಮಸ್ಥಳದಲ್ಲಿ ಜರಗಲಿರುವ 28 ನೇ ವರುಷದ ಭಜನಾ ಕಮ್ಮಟದ ಸಿದ್ಧತಾ ಸಭೆ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರುಗಿತು.
ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಭಜನಾ ಕಮ್ಮಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ತಿಗಳು ಮಂಗಳೋತ್ಸವದಲ್ಲಿ ಭಜಕರು ಭಾಗಿಯಾಗಬೇಕೆಂದು ವಿನಂತಿಸಿದರು. ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಅವರು ಶ್ರೀ ಕ್ಷೇತ್ರದ ಇತಿಹಾಸ ಭಜನಾ ಪರಿಷತ್ ನಡೆದು ಬಂದ ದಾರಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಕಾಸರಗೋಡು ಯೋಜನಾಧಿಕಾರಿ ದಿನೇಶ್ ಅವರು ಕಮ್ಮಟ, ಶಿಬಿರಾರ್ತಿಗಳು, ಸಾಧಕ ಪ್ರಶಸ್ತಿ, ಪರಿಷತ್ತಿನ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿನೀಡಿದರು.
ಸಭೆಯಲ್ಲಿ ವಿವಿಧ ಭಜನಾ ಮಂದಿರಗಳ ಪದಾಧಿಕಾರಿಗಳಾದ ಶ್ರೀರಾಮ, ಗುಣಪಾಲ ಅಮೈ, ತುಕಾರಾಮ ಕೆರೆಮನೆ, ಯಶೋಧ, ಶ್ರೀಲತಾ ಟೀಚರ್, ವಿಜಯ ಶೆಟ್ಟಿ, ಗ್ರಾಮಾಭಿವೃದ್ಧಿಯ ಮೇಲ್ವಿಚಾರಕ ಗೋಪಾಲಕೃಷ್ಣ ಸುಳ್ಯ, ಸುರೇಶ್, ರಮೇಶ್, ರತುಗುಣ, ರಮೇಶ ಹಾಗೂ ಭಜಕರು ಉಪಸ್ಥಿತರಿದ್ದರು. ಕಾಸರಗೋಡು ಭಜನಾ ಪರಿಷತ್ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಲೋಹಿತ್ ವಂದಿಸಿದರು.



