ನವದೆಹಲಿ: ಪಂಜಾಬ್ನಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬಳಿಕದ ಕರಡು ಪಟ್ಟಿಯಿಂದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರು ತೆಗೆದು ಹಾಕಲಾಗಿದೆ. ಅವರ ಹೆಸರನ್ನು 'ಸ್ಥಳಾಂತರಗೊಂಡಿದ್ದಾರೆ' ಎಂದು ವರ್ಗೀಕರಿಸಲಾಗಿದೆ.
ಇದು ಪಂಜಾಬ್ನ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ 'ರಾಜಕೀಯ ದ್ವೇಷದ ಕ್ರಮ' ಎಂದು ಅವರು ಟೀಕಿಸಿದ್ದಾರೆ. ಇತ್ತೀಚೆಗೆ ಎಎಪಿಯ ಆರು ರಾಜ್ಯಸಭಾ ಸದಸ್ಯರೊಂದಿಗೆ ಅವರು ಬಿಜೆಪಿ ಸೇರಿದ್ದರು.
ಈ ಬಗ್ಗೆ 'ಎಕ್ಸ್'ನಲ್ಲಿ ಬರೆದುಕೊಂಡಿರುವ ಅವರು, ಇದು ಕರಡು ಮತದಾರರ ಪಟ್ಟಿಯಾಗಿದ್ದು, ಅಂತಿಮ ಪಟ್ಟಿ ಅಕ್ಟೋಬರ್ನಲ್ಲಿ ಪ್ರಕಟವಾಗಲಿದೆ. ಹೀಗಾಗಿ ಎಸ್ಐಆರ್ ಮಾರ್ಗಸೂಚಿಗಳಡಿ ತಮಗೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.
ಅವರು ಮೊಹಾಲಿಯಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ.
'ಭ್ರಷ್ಟ ಆಮ್ ಆದ್ಮಿ ಪಕ್ಷವನ್ನು ತೊರೆದಾಗಿನಿಂದ ಅದರ ನಾಯಕರು ನನ್ನ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಮ್ಮ ವಿರುದ್ಧ ಪಂಜಾಬ್ ಪೊಲೀಸರು ಮತ್ತು ಪಂಜಾಬ್ ಸರ್ಕಾರದ ಆಡಳಿತ ಯಂತ್ರವನ್ನು ಬಳಸಲಾಗುತ್ತಿದೆ. ಎಎಪಿ ತೊರೆದು ಬಿಜೆಪಿ ಸೇರಿದ ಇತರ ಸಂಸದರೂ ಪಂಜಾಬ್ ಸರ್ಕಾರದ ಗುರಿಯಾಗಿದ್ದಾರೆ. ನನ್ನ ಹೆಸರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ವರ್ಗೀಕರಿಸಿರುವುದು ರಾಜಕೀಯ ದ್ವೇಷದ ಮತ್ತೊಂದು ಕ್ರಮ' ಎಂದು ಚಡ್ಡಾ ಆರೋಪಿಸಿದ್ದಾರೆ.
ಎಎಪಿ ಸರ್ಕಾರ ಪಂಜಾಬ್ನಲ್ಲಿ ತನ್ನ ಸೇಡಿನ ರಾಜಕಾರಣವನ್ನು ಈಗ ಕರಡು ಮತದಾರರ ಪಟ್ಟಿಗೂ ತಂದಿದೆ. ನನ್ನ ಹೆಸರನ್ನು ಅಳಿಸಿರುವುದು ಪ್ರಮಾದವಲ್ಲ. ರಾಜಕೀಯ ದ್ವೇಷದ ಸ್ಪಷ್ಟ ಪ್ರಕರಣ' ಎಂದೂ ಹೇಳಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು 'ಸ್ಥಳಾಂತರಗೊಂಡಿದ್ದಾರೆ' ಎಂದು ಯಾವ ಆಧಾರದ ಮೇಲೆ ಗುರುತಿಸಲಾಗಿದೆ ಎಂದು ಚಡ್ಡಾ ಪ್ರಶ್ನಿಸಿದ್ದಾರೆ. ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಹಿಡಿದು ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು, ಮತದಾರರ ನೋಂದಣಿ ಅಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳವರೆಗೆ ಈ ಪ್ರಕ್ರಿಯೆಯಲ್ಲಿ ಪಂಜಾಬ್ ಸರ್ಕಾರದ ಅಧಿಕಾರಿಗಳೇ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ಕೇಡರ್ನ ಐಎಎಸ್ ಅಧಿಕಾರಿಯೊಬ್ಬರು ರಾಜ್ಯದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಅವರು ಉಲ್ಲೇಖಿಸಿದ್ದಾರೆ.
ಸಂಸದರು, ಶಾಸಕರು ಹಾಗೂ ನ್ಯಾಯಾಧೀಶರು ಸೇರಿದಂತೆ ಜನಪ್ರತಿನಿಧಿಗಳಿಗೆ ಎಸ್ಐಆರ್ ಮಾರ್ಗಸೂಚಿಗಳಲ್ಲಿ ನೀಡಿರುವ ರಕ್ಷಣೆಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಾನು ಪಂಜಾಬ್ನ ಹಾಲಿ ರಾಜ್ಯಸಭಾ ಸದಸ್ಯ. ನನ್ನ ಹೆಸರನ್ನು ಪರಿಶೀಲನೆಗೆ ಒಳಪಡಿಸಿದ್ದರೆ, ಪ್ಯಾರಾಗ್ರಾಫ್ 4(d) ಪ್ರಕಾರ ನನ್ನ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಬೇಕಿತ್ತು. ಈ ಸೂಚನೆಯನ್ನು ನಿರ್ಲಕ್ಷಿಸಲಾಗಿಲ್ಲ; ನನ್ನ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಚಡ್ಡಾ ಹೇಳಿದ್ದಾರೆ.
'ಎಎಪಿ ಪಂಜಾಬ್ ಸರ್ಕಾರವನ್ನು ನಡೆಸಬಹುದು. ಆದರೆ ಪಂಜಾಬ್ನ ಕರಡು ಮತದಾರರ ಪಟ್ಟಿ ಅದರ ಖಾಸಗಿ ಆಸ್ತಿಯಲ್ಲ' ಎಂದು ಅವರು ಹೇಳಿದ್ದಾರೆ.

