ನವದೆಹಲಿ (PTI): 'ಸಾರ್ವಜನಿಕ ಸಂಪರ್ಕ (ಪಿಆರ್) ತಂತ್ರಗಳು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಚಿತ್ರಣವನ್ನು ಸುಂದರವಾಗಿ ತೋರಿಸ ಬಲ್ಲವೇ ಹೊರತು, ದೇಶದ ನೈಜ ಆರ್ಥಿಕತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು' ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಡಿಪಿ ಅಂಕಿ-ಅಂಶಗಳ ಕುರಿತು ಕೇಂದ್ರದ ಮಾಜಿ ಹಣಕಾಸು ಕಾರ್ಯ ದರ್ಶಿ ಸುಭಾಷ್ ಚಂದ್ರ ಗರ್ಗ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ಮೋದಿ ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
'ಕಳೆದ ವರ್ಷದ ಜಿಡಿಪಿಯನ್ನು 6 ಟ್ರಿಲಿಯನ್ ರೂಪಾಯಿಗಳಷ್ಟು ಪರಿಷ್ಕರಿಸಿದ್ದರಿಂದ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ದಲ್ಲಿ ಜಿಡಿಪಿ ಶೇ 10.3ರಷ್ಟು ಏರಿಕೆಯಾಗಿದೆ' ಎಂದು ಗರ್ಗ್ ಅವರು ನೀಡಿರುವ ಹೇಳಿಕೆಯ ವಿಡಿಯೊ ತುಣುಕೊಂದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ.
'ಒಂದು ವೇಳೆ ಕಳೆದ ವರ್ಷದ ಜಿಡಿಪಿಯನ್ನು ಪರಿಷ್ಕರಿಸದಿದ್ದರೆ, ಪ್ರಸ್ತುತ ಬೆಲೆಗಳಲ್ಲಿನ ಬೆಳವಣಿಗೆ ದರವು ಶೇ 2.6 ರಷ್ಟಾಗಿರುತ್ತಿತ್ತು' ಎಂದು ಗರ್ಗ್ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದರು.
'ಅಂಕಿ-ಅಂಶಗಳ ಕುಶಲತೆಯಿಂದ ಸೃಷ್ಟಿಸಲಾದ ಕೃತಕ ಜಿಡಿಪಿ ಬೆಳವಣಿಗೆಯ ಬಗ್ಗೆ ಮೋದಿ ಎಷ್ಟೇ ಪ್ರಚಾರ ಮಾಡಿದರೂ, ಅರ್ಥವ್ಯವಸ್ಥೆಯ ನೈಜ ಸ್ವರೂಪ ನಿಶ್ಚಿತವಾಗಿ ಬಯಲಾಗುತ್ತದೆ. ಏಕೆಂದರೆ ಅವರು ವಾಸ್ತವ ಸ್ಥಿತಿಗೆ ಪೂರ್ಣ ವಿರುದ್ಧವಾದುದ್ದನ್ನು ಹೇಳುತ್ತಿದ್ದಾರೆ' ಎಂದು ರಮೇಶ್ ಟೀಕಿಸಿದ್ದಾರೆ.
'ಈ ಕುರಿತು ಗರ್ಗ್ ಹೇಳಿಕೆಯು ಸತ್ಯಾಸತ್ಯತೆಯನ್ನು ಬಯಲು ಮಾಡುತ್ತದೆ. ಅವರ ಅಂದಾಜಿನ ಪ್ರಕಾರ, ನೈಜ ಜಿಡಿಪಿ ಬೆಳವಣಿಗೆಯು ಶೇ 7.8ರ ಬದಲಿಗೆ, ಸುಮಾರು ಶೇ 2.6ರಷ್ಟಿದೆ' ಎಂದಿದ್ದಾರೆ.
'ದೇಶದ ಆರ್ಥಿಕತೆಯು ನಿಜಕ್ಕೂ ಬಲಿಷ್ಠವಾಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ, ಸುಳ್ಳಿನ ಅಡಿ ಪಾಯದ ಮೇಲೆ ಸೃಷ್ಟಿಸಲಾದ ಅಂಕಿ-ಅಂಶಗಳಿಂದ ಬಲವಾದ ಆರ್ಥಿಕತೆ ಕಟ್ಟಲು ಸಾಧ್ಯವಿಲ್ಲ. ಬದಲಾದ ವಾಸ್ತವ ಸ್ಥಿತಿಯನ್ನು ಒಪ್ಪಿಕೊಳ್ಳುವುದರಿಂದ ಅದು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ.

