ನವದೆಹಲಿ: ದೆಹಲಿ-ಎನ್ಸಿಆರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ದೆಹಲಿಯ ವಿವಿಧೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಶನಿವಾರ ಬೆಳಿಗ್ಗೆ ಸಾಮಾನ್ಯವಾಗಿತ್ತು.
ಆದರೆ, ಹವಾಮಾನ ವೈಪರೀತ್ಯದಿಂದಾಗಿ ಇಂಡಿಗೊ ಮತ್ತು ಏರ್ ಇಂಡಿಯಾ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಜಾಗರೂಕರಾಗಿರಲು ಸಲಹೆ ನೀಡಿವೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಸಂಚಾರದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ರಸ್ತೆಗಳಲ್ಲಿ ನೀರು ನಿಂತು ಸಂಚಾರ ಮಂದಗತಿಯಲ್ಲಿರುವುದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪಬೇಕೆಂದೂ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ದೆಹಲಿಗೆ ಆಗಮಿಸುವ ಮತ್ತು ಇಲ್ಲಿಂದ ನಿರ್ಗಮಿಸುವ ವಿಮಾನ ಸೇವೆಗಳ ಮೇಲೆ ಹವಾಮಾನ ವೈಪರೀತ್ಯ ಪರಿಣಾಮ ಬೀರಬಹುದು ಎಂದು ಇಂಡಿಗೊ ಮುನ್ನೆಚ್ಚರಿಕೆ ನೀಡಿದೆ.
ಜಲಾವೃತಗೊಂಡ ಪ್ರದೇಶಗಳು
ದೆಹಲಿಯ ಗೀತಾ ಕಾಲೋನಿ, ಅಕ್ಬರ್ ರೋಡ್, ಕನೆಕ್ಟ್ ಪ್ಲೇಸ್ನ ಔಟರ್ ಸರ್ಕಲ್ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಪ್ರಮಾಣದ ನೀರು ನಿಂತಿದೆ. ಕನೆಕ್ಟ್ ಪ್ಲೇಸ್ನಲ್ಲಿ ಅಂಗಡಿಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದ್ದು, ನೀರನ್ನು ಹೊರಹಾಕಲು ನೀರು ಎತ್ತುವ ಪಂಪ್ಗಳನ್ನು ಅಳವಡಿಸಲಾಗಿದೆ. ಗ್ರೇಟರ್ ನೋಯ್ಡಾ ಮತ್ತು ನೋಯ್ಡಾದ ಹಲವು ಭಾಗಗಳಲ್ಲೂ ಮಳೆಯಾಗಿದೆ.

