ನವದೆಹಲಿ: ನೇಪಾಳ ಮತ್ತು ಚೀನಾದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರದ ವೇಳೆಗೆ 1,375 ಕ್ಕೆ ಏರಿದೆ. ಈ ಪೈಕಿ 1,344 ಸಾವುಗಳು ನೇಪಾಳದಲ್ಲಿ ವರದಿಯಾಗಿವೆ.
ಉಳಿದ 31 ಪ್ರಾಣಹಾನಿ ಗಡಿಯ ಚೀನಾದ ಭಾಗದಲ್ಲಿ ಸಂಭವಿಸಿವೆ ಎಂದು ಚೀನಾದ ಸುದ್ದಿ ಸಂಸ್ಥೆ ಷಿನ್ಹುವಾ ವರದಿ ಮಾಡಿದೆ.
ನೇಪಾಳದಲ್ಲಿ 618 ವಿದೇಶಿಯರು ಸೇರಿದಂತೆ ಸುಮಾರು 5,000 ಜನರು ಮತ್ತು ಚೀನಾದಲ್ಲಿ 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೇಪಾಳದಲ್ಲಿ ನಾಪತ್ತೆಯಾದವರಲ್ಲಿ 275 ಭಾರತೀಯರು ಸೇರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿತ್ತು.
ಈವರೆಗೆ 166 ಭಾರತೀಯರನ್ನು ರಕ್ಷಿಸಲಾಗಿದೆ. 1,907 ಭಾರತೀಯ ನಾಗರಿಕರು ಚೀನಾದಿಂದ ಸುರಕ್ಷಿತವಾಗಿ ನೇಪಾಳಕ್ಕೆ ಪ್ರವೇಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು. ಚೀನಾದ ಬದಿಯಲ್ಲಿ ಯಾವುದೇ ಭಾರತೀಯ ಪ್ರವಾಸಿಗಳು ಸಿಲುಕಿಕೊಂಡಿಲ್ಲ ಎಂದು ಅವರು ತಿಳಿಸಿದರು.
ನೇಪಾಳಕ್ಕೆ ಭಾರತವು ಇದುವರೆಗೆ ಏಳು ವಿಮಾನಗಳ ಮೂಲಕ ಸುಮಾರು 95 ಟನ್ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಪೂರೈಸಿದೆ ಎಂದು ಜೈಸ್ವಾಲ್ ಹೇಳಿದರು.
ಚೀನಾ ಗಡಿಯ ಉತ್ತರದ ನೇಪಾಳದ ರಸುವಾ ಜಿಲ್ಲೆಯಲ್ಲಿ ಈ ಪ್ರವಾಹ ಸಂಭವಿಸಿದೆ. ಈ ಪರ್ವತ ಪ್ರದೇಶದ ಜಿಲ್ಲೆಯು ಕಾಠ್ಮಂಡುವಿನಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ಆ ಪ್ರದೇಶದಲ್ಲಿ ಯಾವುದೇ ಮಳೆ ಬಾರದ ಕಾರಣ ಅಲ್ಲಿನ ನಿವಾಸಿಗಳಿಗೆ ಪ್ರವಾಹದ ಬಗ್ಗೆ ಯಾವುದೇ ಮುನ್ಸೂಚನೆ ಸಿಕ್ಕಿರಲಿಲ್ಲ.
ಪ್ರವಾಹವು ಹಿಮನದಿ ಕುಸಿತದಿಂದ ಉಂಟಾಗಿದ್ದು, ಇದು ನೀರು ಮತ್ತು ಅವಶೇಷಗಳ ದೊಡ್ಡ ಪ್ರವಾಹವನ್ನು ಕೆಳಭಾಗಕ್ಕೆ ತಂದಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಹವಾಮಾನ ಬದಲಾವಣೆಗಾಗಿ ಭಾರತ, ಚೀನಾ ಮತ್ತು ಅಮೆರಿಕದಂತಹ ಅಗ್ರ ಹಸಿರುಮನೆ ಅನಿಲ ಹೊರಸೂಸುವ ದೇಶಗಳು ನೇಪಾಳಕ್ಕೆ ಪರಿಹಾರ ನೀಡಬೇಕು ಎಂದು ಮಂಗಳವಾರ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈಸ್ವಾಲ್, ಹವಾಮಾನ ಬದಲಾವಣೆಯು ಒಂದು ಸಾಮಾನ್ಯ ಸವಾಲು ಎಂದು ಭಾರತವು ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದೆ ಎಂದು ಹೇಳಿದರು.
ಈ ಸಂಬಂಧದ ಕ್ರಮವು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ ತತ್ವವನ್ನು ಆಧರಿಸಿರಬೇಕು ಎಂದು ಅವರು ತಿಳಿಸಿದರು. ಐತಿಹಾಸಿಕವಾಗಿ ಹೊರಸೂಸುವಿಕೆಗೆ ಕಾರಣರಾದ ಮತ್ತು ಹವಾಮಾನ ಬದಲಾವಣೆಗೆ ಹೆಚ್ಚು ಕೊಡುಗೆ ನೀಡಿರುವ ಅಭಿವೃದ್ಧಿ ಹೊಂದಿದ ದೇಶಗಳು ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸಬೇಕು ಎಂದು ಜೈಸ್ವಾಲ್ ಹೇಳಿದರು.
ನೇಪಾಳವು ಭಾರತ ಅಥವಾ ಬೇರೆ ಯಾವುದೇ ದೇಶದಿಂದ ಔಪಚಾರಿಕವಾಗಿ ಪರಿಹಾರವನ್ನು ಕೋರಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ ಖನಾಲ್, ಬದಲಿಗೆ ವಿಪತ್ತನ್ನು ಹವಾಮಾನ ಬದಲಾವಣೆಯ ದೃಷ್ಟಿಕೋನದಿಂದ ನೋಡಲು ಜಾಗತಿಕ ಸಮುದಾಯಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

