ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಚುಟುಕುಗಳು ನಿರಂತರತೆ ಕಾಯ್ದುಕೊಂಡಲ್ಲಿ ಬೆಳೆಯುತ್ತದೆ=ಡಾ.ಯು.ಮಹೇಶ್ವರಿ.
ಮಂಜೇಶ್ವರ: ರೂಪಕದ ಭಾಷೆ ಕವಿತೆಯ ಆಶಯವನ್ನು ಹುದುಗಿಸಿ, ಮತ್ತೆಮತ್ತೆ ಓದಬೇಕೆಂಬ ತುಡಿತ ಮೂಡಿಸಬೇಕು. ಯುಗಧರ್ಮದಂತೆ ಕವಿತೆಯ ಸ್ವರೂಪ ಬದಲಾಗುವುದು ಸಹಜ ಎಂದು ಕಣ್ಣೂರು ವಿವಿ ಕನ್ನಡ ಭಾಷಾ ಸಂಶೋಧನಾ ಕೇಂದ್ರದ ನಿದರ್ೇಶಕಿ ಡಾ.ಯು.ಮಹೇಶ್ವರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಲೇಖಕರ ಸಂಘ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಟ್ರಸ್ಟ್ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಆಶ್ರಯದಲ್ಲಿ ಶನಿವಾರ ಸಂಜೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ವೇದಿಕೆಯಲ್ಲಿ ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ವೈದ್ಯ ಡಾ.ರಮಾನಂದ ಬನಾರಿಯವರ "ಮುತ್ತು ನೀರಾಗದು" ಕವನ ಸಂಕಲನ ಬಿಡುಗಡೆ ಸಮಾರಂಭದ ಭಾಗವಾಗಿ ಆಯೋಜಿಸಲಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ನೀಳ್ಗವಿತೆಯ ಸ್ಥಾನದಲ್ಲಿ ಚುಟುಕುಗಳು ಇಂದಿನ ಕಾಲಮಾನಕ್ಕನುಸರಿಸಿ ವೇಗವಾಗಿ ಬೆಳೆಯುತ್ತಿರುವುದಾದರೂ ಅವುಗಳು ತಕ್ಷಣದ ರೋಮಾಂಚನ ನೀಡಿ ಹೋಗುತ್ತವೆ. ಆದರೆ ಅವುಗಳು ನಿರಂತರತೆ ಕಾಯ್ದುಕೊಂಡಲ್ಲಿ ಬೆಳೆಯುತ್ತದೆ ಎಂದು ತಿಳಿಸಿದ ಅವರು, ಜೀವನದ ಪ್ರೀತಿ ಕಾವ್ಯ ಪ್ರೀತಿಗೆ ಕಾರಣ ಎಂದು ತಿಳಿಸಿದರು. ವ್ಯಾವಹಾರಿಕ ಬದುಕು ಕವಿತೆಯನ್ನು ಸೃಜಿಸಲಾರದು, ಅದು ಹರಳುಗಟ್ಟುವಿಕೆಯ ತಪಸ್ಸಿನ ಕಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾವದ ಸೆಳೆತದಿಂದ ಅಕ್ಷರಗಳು ಲಾಲಿತ್ಯಕ್ಕೊಳಗಾಗಿ ಹುಟ್ಟಿಕೊಳ್ಳುವ ಸಾಹಿತ್ಯ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಕವಿ ಆದೇಶಿಸುವುದಲ್ಲ; ಆಶಯ ವ್ಯಕ್ತಪಡಿಸಲಷ್ಟೆ ಸ್ವಾತಂತ್ರ್ಯ ಎಂಬ ಅರಿವು ಬೇಕು ಎಂದು ತಿಳಿಸಿದರು.
ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ, ವಿಜಯಲಕ್ಷ್ಮೀ ಶ್ಯಾನುಭೋಗ್, ಡಾ.ರತ್ನಾಕರ ಮಲ್ಲಮೂಲೆ, ಡಾ.ಧನಂಜಯ ಕುಂಬಳೆ, ಅಶೋಕ್ ಕುಮಾರ್ ಕಾಸರಗೋಡು, ಬಾಲ ಮಧುರಕಾನನ, ಯೋಗೀಶ್ ರಾವ್ ಚಿಗುರುಪಾದೆ, ಸತ್ಯವತಿ ಕೊಳಚಪ್ಪು, ಅಕ್ಷತಾರಾಜ್ ಪೆರ್ಲ, ನೀರಬಿದಿರೆ ನಾರಾಯಣ ಸುಳ್ಯ, ವಿ.ಬಿ.ಕುಳಮರ್ವ, ಹರೀಶ್ ಸುಲಾಯ ಒಡ್ಡಂಬೆಟ್ಟು, ಪುರುಷೋತ್ತಮ ಭಟ್ ಕೆ ಸ್ವರಚಿತ ಕವನಗಳನ್ನು ವಾಚಿಸಿದರು.
ಶಿಕ್ಷಕಿ, ಕವಯಿತ್ರಿ ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಡಾ.ರಮಾನಂದ ಬನಾರಿ ಉಪಸ್ಥಿತರಿದ್ದರು.


