HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          17 ವರ್ಷ ಬಳಿಕ ಊರಿಗೆ
             ಸ್ನೇಹಾಲಯದ ಅಭಯದಲ್ಲಿ ಮುತ್ತುವಿಗೆ ಮರು ಜನ್ಮ
    ಮಂಜೇಶ್ವರ: 17 ವರ್ಷಗಳ ಬಳಿಕ ಮುತ್ತು ಹುಟ್ಟೂರಿಗೆ.  ಹೌದು!.....   ತಮಿಳ್ನಾಡು ಶಿವಗಂಗಾ ಬಳಿಯ ಎಸ್ಕೋಟೆಪಟ್ಟಿ ಎಂಬಲ್ಲಿನ ನಿವಾಸಿ ಮುತ್ತು (48) ಸುದೀರ್ಘ 17 ವರ್ಷಗಳ ಬಳಿಕ ತನ್ನ ತವರನ್ನು ಸೇರಿದ್ದಾರೆ. ಸ್ನೇಹಾಲಯವೆಂಬ ಸ್ನೇಹದ ಮನೆಯು ಬದುಕು ಕೊಟ್ಟ ಮತ್ತೋರ್ವ ವ್ಯಕ್ತಿ ಇವರು. ನಿನ್ನೆ ಮಂಜೇಶ್ವರದ ಸ್ನೇಹಾಲಯಕ್ಕೆ ತಲುಪಿದ ಮುತ್ತುವಿನ ಪುತ್ರ ಹಾಗೂ ಸಹೋದರರು ಅವರನ್ನು ಊರಿಗೆ ಕರೆತಂದಿದ್ದಾರೆ.
    ಮುತ್ತು ತಮಿಳ್ನಾಡಿನ ಶಿವಗಂಗಾ ಎಸ್ಕೋಟೆಪಟ್ಟೆ ನಿವಾಸಿ. ತಾಯ್ತಂದೆ, ಪತ್ನಿ, ಇಬ್ಬರು ಮಕ್ಕಳು ಹಾಗೂ ನಾಲ್ವರು ಸಹೋದರರು ಅವರಿಗೆ. ಸಣ್ಣ ಪುಟ್ಟ ಕೆಲಸ ಮಾಡಿ ಪತ್ನಿ, ಮಕ್ಕಳನ್ನೊಳಗೊಂಡ ಕುಟುಂಬವನ್ನು ಸಾಕುತ್ತಿದ್ದರು. 17 ವರ್ಷಗಳ ಹಿಂದೆ ಕೆಲಸಕ್ಕೆಂದು ಹೇಳಿ ಎಂದಿನಂತೆ ಮನೆಯಿಂದ ಹೊರಟವರು ಆದರೆ, ಬಳಿಕ ಮರಳಿ ಬಂದಿರಲಿಲ್ಲ. ಆಗ ಮುತ್ತುವಿನ ಕಿರಿಯ ಪುತ್ರ ಮಾಶ್ಲಾ ಮಣಿಗೆ ಕೇವಲ ಎರಡರ ಹರೆಯ. ಮನೆ ಮಂದಿಯು ಹುಡುಕಾಡಿದ್ದಕ್ಕೆ ಲೆಕ್ಕವಿಲ್ಲ. ಪೊಲೀಸರಿಗೆ ದೂರು ಸಲ್ಲಿಸಲಾಯಿತು. ವರ್ಷಗಳ ಕಾಲ ಹುಡುಕಾಟ, ಪ್ರಾರ್ಥನೆಯಲ್ಲಿ ಕಳೆದರು. ಸುಳಿವು ಕೂಡಾ ದೊರೆತಿರಲಿಲ್ಲ. ಬದುಕಿದ್ದರೆ ಇಷ್ಟರಲ್ಲಿ ಬರುತ್ತಿದ್ದರು. ಅವರು ಸತ್ತಿದ್ದಾರೆಂದೇ ತಿಳಿದ ಮನೆ ಮಂದಿ ಆ ನಿಟ್ಟಿನಲ್ಲಿ ಕ್ರಿಯೆಗಳನ್ನೆಲ್ಲಾ ಮುಗಿಸಿದ್ದರು.
    ಇತ್ತ, ದಿಢೀರನೆ ಅದೇನೋ ಮಾನಸಿಕ ಸ್ಥಿಮಿತ ಕಳೆದು ಹೋಗಿದ್ದ ಮುತ್ತು ಎಲ್ಲವನ್ನೂ, ಎಲ್ಲರನ್ನೂ ಮರೆತು ಲಂಗು ಲಗಾಮಿಲ್ಲದೆ ರಸ್ತೆಯಲ್ಲಿ ನಡೆಯುತ್ತಲೇ ಇದ್ದರು. ಯಾರಾದರೂ ಎಸೆದ ಎಂಜಲನ್ನು, ಕಸದ ತೊಟ್ಟಿಯಿಂದ ಹಳಸಿದ ಆಹಾರವನ್ನು ಸೇವಿಸುತ್ತಿದ್ದ ಫಲವಾಗಿ ಪ್ರಾಣ ಉಳಿದಿತ್ತು.
   ನಾಲ್ಕು ವರ್ಷಗಳ ಹಿಂದೆ.... ಕರಾರುವಾಕ್ಕಾಗಿ ಹೇಳಿದರೆ 2014 ರ ಮಾಚರ್್ 30. ಮಂಜೇಶ್ವರದ "ಸ್ನೇಹಾಲಯ" ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ನಿದರ್ೇಶಕರಾಗಿರುವ ಜೋಸೆಫ್ ಕ್ರಾಸ್ತಾ ಅವರು ಅಗತ್ಯಕ್ಕಾಗಿ ಮಂಗಳೂರಿಗೆ ತೆರಳಿದ್ದಾಗ ರಸ್ತೆ ಬದಿಯ ಕಸದ ತೊಟ್ಟಿಯಿಂದ ಹಳಸಿದ ಆಹಾರ ಬಾಚಿ ತಿನ್ನುತ್ತಿದ್ದ ಕೃಶಕಾಯದ, ಶರೀರವಿಡೀ ಗಾಯಗಳಾಗಿರುವ, ಕೊಳಕಾದ ದೇಹದಿಂದ ಗಬ್ಬು ನಾತ ಬೀರುತ್ತಿದ್ದ, ಸಂಪೂರ್ಣ ಮಾನಸಿಕ ಸ್ಥಿಮಿತ ಕಳಕೊಂಡಿದ್ದ ವ್ಯಕ್ತಿಯನ್ನು ಕಾಣುತ್ತಾರೆ. ಒಂದು ಕ್ಷಣವೂ ಆಲೋಚಿಸದೆ ಅವರು ಸದ್ರಿ ವ್ಯಕ್ತಿಯನ್ನು ತನ್ನ ಕಾರಿನೊಳಗೆ ಕೂಡಿ ಹಾಕಿ ಸ್ನೇಹಾಲಯ ಕೆಂದ್ರದಲ್ಲಿ ವಸತಿ ಕಲ್ಪಿಸುತ್ತಾರೆ. ಸೂಕ್ತ ಚಿಕಿತ್ಸೆ, ಆರೈಕೆಯ ಫಲವಾಗಿ ಅವರೀಗ ಪೂರ್ಣ ಗುಣಮುಖರಾಗಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಊರಿನ ವಿಳಾಸಕ್ಕೆ ಸ್ನೇಹಾಲಯದಿಂದ ಕಳೆದ ತಿಂಗಳು ಪತ್ರ ರವಾನಿಸಲಾಯಿತು. ಪತ್ರಕ್ಕೆ ತಕ್ಷಣವೇ ಸ್ಪಂದಿಸಿದ ಮುತ್ತುವಿನ ಕುಟುಂಬಿಕರು ಶುಕ್ರವಾರ  ಸ್ನೇಹಾಲಯಕ್ಕೆ ತಲುಪಿದ್ದು, ಅಲ್ಲಿ ಆನಂದ ಬಾಷ್ಪ ಹರಿಯಿತು.
   ತಂದೆ ಹೊರಟು ಹೋಗಿದ್ದಾಗ ಕೇವಲ ಎರಡು ವರ್ಷದ ಪುಟಾಣಿಯಾಗಿದ್ದ ಮಾಶ್ಲಾ ಮಣಿ (19) ಮುತ್ತುವನ್ನು ಬಿಗಿ ಹಿಡಿದು "ಇದು ನಮ್ಮಪ್ಪನ ಪುನರ್ಜನ್ಮ" ವೆಂದು ಹೇಳಿ ಆನಂದ ಪಟ್ಟರು. ಮುತ್ತುವಿನ ಅಣ್ಣಂದಿರಾದ ಪಾಂಡಿ ಸೆಲ್ವಂ, ಚೆನ್ನಯ್ಯ, ಅಲಗ್ ಎಂಬವರೂ ಜೊತೆಗಿದ್ದರು. ಸ್ನೇಹಾಲಯದ ನಿವಾಸಿಗಳು ಹಾಗೂ ಸಿಬ್ಬಂದಿಗಳು ಸೇರಿ ಮುತ್ತುವನ್ನು ಸಂತೋಷದಿಂದಲೇ ಹೃದ್ಯವಾಗಿ ಬೀಳ್ಕೊಟ್ಟರು. ಸ್ನೇಹಾಲಯದ ಸ್ನೇಹ ಸಿಂಚನದಲ್ಲಿ ಮುತ್ತು ಮರು ಜನ್ಮ ಪಡೆಯುವಂತಾದರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries