ಕಿಳಿಂಗಾರು ಸಾಯಿಮಂದಿರದಲ್ಲಿ ಬಾಬಾ ಜನ್ಮದಿನಾಚರಣೆ
0
ನವೆಂಬರ್ 25, 2018
ಬದಿಯಡ್ಕ: ಆಧ್ಯಾತ್ಮಿಕ ಶಿಕ್ಷಣದೊಂದಿಗೆ ಅದ್ಭುತ ಪವಾಡಗಳ ಮೂಲಕ ಅವತಾರ ಪುರುಷ ಎಂದೇ ಖ್ಯಾತರಾಗಿದ್ದ ಸತ್ಯ ಸಾಯಿಬಾಬಾ ಅವರ ಜನ್ಮದಿನವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಕಿಳಿಂಗಾರು ಶ್ರೀಸಾಯಿಮಂದಿರದಲ್ಲಿ ಶುಕ್ರವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಾಬಾ ಅವರು ಸ್ಥಾಪಿಸಿದ ಹಲವಾರು ಸಂಸ್ಥೆಗಳು, ವಿವಿಧ ಸ್ವತಂತ್ರ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಇತರ ಸೇವಾ ವಲಯಗಳು ಇಂದು ಅವರ ಅನುಯಾಯಿಗಳು ಮಾಡುತ್ತಿರುವುದು ಶ್ಲಾಘನೀಯ. ಏಕತೆಯ ನಂಬಿಕೆಯನ್ನು ಜಗತ್ತಿಗೆ ಸಾರಿದ ಬಾಬಾ ಅವರು ಬಡವರ ಸೇವೆಗಾಗಿ ಖಟಿಬದ್ಧರಾಗಿದ್ದರು. ಶಿಕ್ಷಣದ ವ್ಯವಸ್ಥೆ, ಉದ್ಯೋಗ, ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಸಾಮಾನ್ಯ ಜನರ ಬದುಕಿಗೆ ನೆರಳಾದ ಬಾಬಾ ಅವರ ಪರಮ ಭಕ್ತರಾಗಿರುವ ಕಿಳಿಂಗಾರು ಸಾಯಿರಾಮ ಭಟ್ ಅವರು ಬಾಬಾ ತೋರಿದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದು ಕಾಸರಗೋಡು ಎಂಎಲ್ಎ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ಪಟ್ಟರು. ಸಮಾಜದ ಏಳಿಗೆಗಾಗಿ ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡುವ ಗಡಿನಾಡಿನ ಸಾಯಿಬಾಬಾ ಕಿಳಿಂಗಾರು ಸಾಯಿರಾಂ ಭಟ್ ತನ್ನ ಸರಳತೆ ಹಾಗೂ ಸೇವಾ ಕಾರ್ಯದಿಂದ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬದಿಯಡ್ಕ ಪಂಚಾಯತು ಮಾಜಿ ಅಧ್ಯಕ್ಷರಾದ ಮಾಹಿನ್ ಕೇಳೋಟ್ ಸಾಯಿರಾಂ ಭಟ್ ಅವರ ಜನಸೇವೆ, ಪ್ರಕೃತಿ ಪ್ರೇಮ, ಪ್ರಾಣಿದಯೆ ಮುಂತಾದ ವೈಶಿಷ್ಟ್ಯಪೂರ್ಣ ಬದುಕನ್ನು ಕೊಂಡಾಡಿದರು. ಸದಾ ಜನರ ನೋವಿಗೆ ಮಿಡಿಯುವ ಮನಸಿನ ಹಿರಿತನವನ್ನು ಹಾಗೂ ಅವರಿಗೆ ಬೆಂಬಲವಾಗಿ ನಿಲ್ಲುವ ಕುಟುಂಬವನ್ನು ತನ್ನ ಮಾತುಗಳ ಮೂಲಕ ಅಭಿನಂದಿಸಿದರು.
ಸಾಯಿಬಾಬಾ ಅವರ 93ನೇ ಹುಟ್ಟುಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಶಿವರಾಮ ಬೇಳ, ಶಶಿ ನಾಯ್ಕಾಪು, ಇವರಿಗೆ 253 ಹಾಗೂ 254ನೇ ಮನೆಗಳನ್ನು ದಾನವಾಗಿ ನೀಡುವುದರ ಮೂಲಕ 254 ಕುಟುಂಬಗಳಿಗೆ ನೆಮ್ಮದಿಯ ನೆರಳನ್ನು ನೀಡಿದರು.
ಸಾಯಿಭಜನೆ
ಕಲಿಯುಗದಲ್ಲಿ ದೇವರನ್ನು ಸಂತೃಪ್ತಿಗೊಳಿಸುವ ಸುಲಭ ಮಾರ್ಗ ಭಜನೆ. ಭಜನೆಯನ್ನು ಭಕ್ತಿ ಹಾಗೂ ಸುಮಧುರವಾದ ಸ್ವರದಲ್ಲಿ ಹಾಡಿ ನೆರೆದ ಜನಮನದಲ್ಲಿ ಶಾಂತಿ ಸಮಾಧಾನದ ಭಾವವನ್ನು ಮೂಡುಸಿದ ಮಂಗಳೂರಿನ ಕೊಂಚಾಡಿ ಶ್ರೀ ರವಿಶಂಕರ್ ವಿದ್ಯಾಮಂದಿರ ಇವರ ಸಾಯಿಭಜನಾ ಕಾರ್ಯಕ್ರಮ ಇಂದಿನ ಆಚರಣೆಯ ಪ್ರಧಾನ ಆಕರ್ಷಣೆಯಾಗಿತ್ತು. ಸಾಯಿಬಾಬಾ ಅವರ ಸ್ತುತಿಗಳನ್ನು ಹಾಡಿ ಸಾಯಿ ಮಂದಿರದಲ್ಲಿ ಸಂಚಲನ ಮೂಡಿಸಿದ ತಂಡದ ಸದಸ್ಯರ ಗಾಯನ ಕೇಳುಗರಲ್ಲಿ ರೋಮಾಂಚನವನ್ನುಂಟುಮಾಡಿತು.
ಸಾಯಿಬಾಬಾ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಕಿಳೀಂಗಾರು ಶಾಲೆಯ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು. ಮಾತ್ರವಲ್ಲದೆ ಪೂಜೆಯ ಬಳಿಕ ಪ್ರಾರ್ಥನೆ ಸಲ್ಲಿಸಿ ವಿಶಿಷ್ಟವಾದ ಖಾದ್ಯಗಳೊಂದಿಗೆ ಸಾಯಿಬಾಬಾರಿಗೆ ಸಮಪರ್ಿಸಿದ ನೈವೇದ್ಯ ಹಾಗೂ ಅನ್ನ ಪ್ರಸಾದವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಶ್ರೀನಾಥ್, ಕೇಶವ ಭಟ್, ಸುಬ್ರಾಯ ಭಟ್, ಸುಬ್ರಹ್ಮಣ್ಯ ಭಟ್ ಮತ್ತು ಕುಟುಂಬದ ಸದಸ್ಯರಾದ ಶಾಂತಿ, ಮಧುರ, ಶೀಲ ಹಾಗೂ ಸಾಯಿರಾಂ ಭಟ್ ಅವರ ಪತ್ನಿ ಶಾರದಮ್ಮ ಉಪಸ್ಥಿರಿದ್ದರು. ಮಾತ್ರವಲ್ಲದೆ ವಿವಿಧ ಪಂಚಾಯತುಗಳ ಸದಸ್ಯರು, ನೌಕರರು, ಬದಿಯಡ್ಕ ಠಾಣೆಯ ಅರಕ್ಷಕ ಸಿಬ್ಬಂಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಯಿಬಾಬಾರ ಅನುಗ್ರಹಕ್ಕೆ ಪಾತ್ರರಾದರು. ಬದಿಯಡ್ಕ ಪಂಚಾಯತ್ ಅಧ್ಯಕ್ಷರಾದ ಕೆ.ಕೃಷ್ಣ ಭಟ್ ಸ್ವಾಗತಿಸಿ ಸಂದೇಶ್ ವಂದಿಸಿದರು.




