ಎಡನೀರು ಶ್ರೀಗಳಿಗೆ ಪ್ರತಿಷ್ಠಿತ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ಅಭಿನಂದನೆ ಇಂದು
0
ಡಿಸೆಂಬರ್ 15, 2018
ಬದಿಯಡ್ಕ: ತಿರುವನಂತಪುರದ ರಾಜ್ಯ ಕಾನೂನು ಸಲಹೆ ಮತ್ತು ನೆರವು ಹಾಗೂ ಅಭಿವೃದ್ದಿ ಟ್ರಸ್ಟ್ ಪ್ರತಿವರ್ಷ ಕೊಡಮಾಡುವ ವಿಶಿಷ್ಟ ಕಾನೂನು ಸಾಧನಾಶೀಲರಿಗಿರುವ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ವಾರ್ಷಿಕ ಪ್ರಶಸ್ತಿ-2018 ಕ್ಕೆ ಹಾಲಿ ವರ್ಷದ ಗೌರವಾಭಿನಂದನೆಗೆ ಶ್ರೀಮಡ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಯ್ಕೆಯಾಗಿದ್ದಾರೆ.
ಇಂದು(ಡಿ.16) ಸಂಜೆ ತಿರುವನಂತಪುರದ ರಾಜ್ಯ ಸೆಕ್ರಟರಿಯೇಟ್ ಸಮೀಪದ ಅಧ್ಯಾಪಕ ಭವನ ಸಭಾಂಗಣದಲ್ಲಿ ಗೌರವಾಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 1.30ಕ್ಕೆ ಕಾನೂನು ನೆರವುಗಳ ವಿಶೇಷೋಪನ್ಯಾಸ ವಿಚಾರ ಸಂಕಿರಣ ನಡೆಯಲಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೇವನ್ ರಾಮಚಂದ್ರನ್ ಉದ್ಘಾಟಿಸುವರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪ್ರೊ.ಡಾ. ಎನ್.ಕೆ.ಜಯಕುಮಾರ್ ವಿಶೇಷೋಪನ್ಯಾಸ ನೀಡುವರು. ಕಾನೂನು ಟ್ರಸ್ಟ್ನ ನ್ಯಾಯವಾದಿ ಜಯಕೃಷ್ಣ ಡಿ ವಿಚಾರ ಸಂಕಿರಣ ಸಂಯೋಜಕರಾಗಿ ಭಾಗವಹಿಸುವರು. ಈ ಸಂದರ್ಭ ನ್ಯಾಯವಾದಿಗಳು ಹಾಗೂ ವಿದ್ಯಾರ್ಥಿಗಳಿಂದ ಪ್ರಬಂಧಮಂಡನೆಯೂ ನಡೆಯಲಿದೆ.
ಸಂಜೆ 4.30 ಕ್ಕೆ ನಡೆಯುವ ಪ್ರಶಸ್ತಿ ಪ್ರಧಾನ- ಅಭಿನಂದನಾ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶ ಶಾಹಿದ್ ಅಹಮ್ಮದ್ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪ್ರೊ.ಡಾ. ಎನ್.ಕೆ.ಜಯಕುಮಾರ್, ಪತ್ತನಂತಿಟ್ಟ ಜಿಲ್ಲಾ ನ್ಯಾಯಾಧೀಶೆ ಸುಲೇಖಾ ಎಂ, ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ನ್ಯಾಯವಾದಿ ಜೋಸೆಫ್ ಜೋನ್ ಉಪಸ್ಥಿತರಿದ್ದು ಶುಭಹಾರೈಸುವರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ದೇವನ್ ರಾಮಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡುವರು.
ವೇದಿಕೆಯಲ್ಲಿ ರಾಜ್ಯಪಾಲ ಜಸ್ಟೀಸ್ ಪಿ.ಸದಾಶಿವಂ ಅವರು ಶ್ರೀಮದ್ ಎಡನೀರು ಮಠಾಧೀಶರಿಗೆ ಪ್ರಸ್ತುತ ಸಾಲಿನ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ವಾರ್ಷಿಕ ಪ್ರಶಸ್ತಿ-2018 ಸಮರ್ಪಿಸಿ ಅಭಿನಂದಿಸುವರು. ಕಾನೂನು ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಪಿ, ಕಾರ್ಯದರ್ಶಿ ನ್ಯಾಯವಾದಿ ಕೆ.ಪ್ರೇಮ್ ಕುಮಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿರುವರು.
ರಾಷ್ಟ್ರದ ಪರಮೋಚ್ಚ ನ್ಯಾಯಾಲಯದಲ್ಲಿ 1973 ಸಾಂವಿಧಾನಿಕವಾಗಿ ಕೊಡಮಾಡಲ್ಪಟ್ಟ ಐತಿಹಾಸಿಕ ಕೇಶವಾನಂದ ಭಾರತೀ ವರ್ಸಸ್ ಕೇರಳ ರಾಜ್ಯ ಸರಕಾರ-4ಎಸ್ಸಿಸಿ 225 ಕಲಮಿಗೆ ಅನ್ವಯಿಸಿ ಈ ವಿಶಿಷ್ಟ ಅಭಿನಂದನೆ ಶ್ರೀಕೇಶವಾನಂದ ಭಾರತೀ ಶ್ರೀಗಳಿಗೆ ಸಲ್ಲಿಕೆಯಾಗುತ್ತಿದೆ.


