"ಯಕ್ಷರಮೇಶ-60ರ ಹೆಜ್ಜೆ"-ಬಾಯಾರು ರಮೇಶ ಶೆಟ್ಟಿ 60ರ ಅಭಿನಂದನೆಗೆ ಸಿದ್ಧತೆ, ಸಮಾಲೋಚನೆಗಳ ಆರಂಭ
0
ಮಾರ್ಚ್ 14, 2019
ಉಪ್ಪಳ: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಪ್ರಸಿದ್ಧ ಹವ್ಯಾಸಿ ವೇಷಧಾರಿ, ಹೊಸ ಪೀಳಿಗೆಯೊಂದನ್ನು ಸಮರ್ಥವಾಗಿ ರೂಪಿಸಿದ ಹಿಮ್ಮೇಳ-ಮುಮ್ಮೇಳದ ಅರಿವುಳ್ಳ ಸಮರ್ಥ ಯಕ್ಷಗಾನ ನಾಟ್ಯಗುರು ಬಾಯಾರು ರಮೇಶ್ ಶೆಟ್ಟಿ 60ರ ಹೊಸ್ತಿಲಿನಲ್ಲಿದ್ದು, ಅವರನ್ನು ಎರಡು ದಿನಗಳ ಸಂಭ್ರಮದ ಕಾರ್ಯಕ್ರಮದೊಂದಿಗೆ ಅಭಿನಂದಿಸಲು ಶಿಷ್ಯರು ಮತ್ತು ಅಭಿಮಾನಿ ಆಪ್ತರು ನಿರ್ಧರಿಸಿದ್ದಾರೆ.
"ಯಕ್ಷ ರಮೇಶ-60ರ ಹೆಜ್ಜೆ" ಎಂಬ ಹೆಸರಿನಲ್ಲಿ ಕಾರ್ಯಕ್ರಮಗಳು ಜರಗಲಿದ್ದು, ಮಾ.10ರಂದು ಮುಳಿಗದ್ದೆ ಹೆದ್ದಾರಿ ಮಿತ್ರಮಂಡಳಿಯಲ್ಲಿ ಈ ಸಂಬಂಧ ಸಮಾಲೋಚನಾ ಸಭೆ ನಡೆಯಿತು. ಅಭಿನಂದನಾ ಸಮಿತಿಗೆ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಅಧ್ಯಕ್ಷರಾಗಿಯೂ, ನ್ಯಾಯವಾದಿ ಪೆರುವೋಡಿ ರಾಮಕೃಷ್ಣ ಭಟ್ ಪ್ರಧಾನ ಕಾರ್ಯದರ್ಶಿ ಮತ್ತು ಹರಿಣಾಕ್ಷ ಬಿ.ಬಾಯಾರು ಖಜಾಂಜಿಗಳಾಗಿ ಆಯ್ಕೆಯಾಗಿದ್ದಾರೆ. ವಿಸ್ತøತವಾದ ಸಮಿತಿ ರಚನೆ ಶೀಘ್ರವೇ ನಡೆಯಲಿದೆ.
ಮಂಗಳೂರು, ಸುರತ್ಕಲ್, ಪುತ್ತೂರು, ಬಂಟ್ವಾಳ, ಸಹಿತ ನಾಡಿನ ಹಲವೆಡೆ ಬಾಯಾರು ರಮೇಶ ಶೆಟ್ಟರ ನೂರಾರು ಶಿಷ್ಯಬಳಗವಿದ್ದು, ಈ ಪೈಕಿ ಅನೇಕರು ಇಂದು ವೃತ್ತಿ-ಹವ್ಯಾಸಿ ರಂಗ, ಮಹಿಳಾ ರಂಗದ ಪ್ರಸಿದ್ಧ ಕಲಾವಿದರಾಗಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ 2ದಿನವೂ ರಮೇಶ ಶೆಟ್ಟರ ಸಮಗ್ರ ಶಿಷ್ಯ ಬಳಗದ ಯಕ್ಷಗಾನ ಪ್ರದರ್ಶನಗಳ ಪ್ರತಿಭಾ ವೈವಿಧ್ಯತೆ ದರ್ಶನವಾಗಲಿದೆ. ಅಲ್ಲದೇ ಬಾಯಾರು ರಮೇಶ ಶೆಟ್ಟರು ಛಾಪೊತ್ತಿದ ವೇಷಗಳ ತುಣುಕು ಪ್ರದರ್ಶನವಾಗಲಿದೆ. ಕಾರ್ಯಕ್ರಮದ ಸಿದ್ಧತೆ ಆರಂಭಗೊಂಡಿದ್ದು, ನಾಡಿನೆಲ್ಲೆಡೆ ಇರುವ ರಮೇಶ ಶೆಟ್ಟಿಯವರ ಶಿಷ್ಯರು-ಅಭಿಮಾನಿಗಳ ನೆರವಿನಿಂದ ಸಮಾರಂಭ ಯಶಸ್ವಿಗೊಳಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಮುಳಿಗದ್ದೆ ಮಿತ್ರಮಂಡಳಿಯಲ್ಲಿ ಕುರಿಯ ಗೋಪಾಲಕೃಷ್ಣ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಪೆರುವೋಡಿ ರಾಮಕೃಷ್ಣ ಭಟ್, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಭಾಗವತ ಜಿ.ಕೆ.ನಾವಡ, ಉದಯಕುಮಾರ್ ಅಮ್ಮೇರಿ, ಶೇಖರ ಶೆಟ್ಟಿ ಬಾಯಾರು, ದಿನೇಶ, ಮುರಳಿ ಬಾಯಾರು, ಮುತ್ತಪ್ಪ ಮೊದಲಾದವರು ಪಾಲ್ಗೊಂಡು ಸಲಹೆ, ಸೂಚನೆಗಳನ್ನಿತ್ತರು.




