ಜೀವನದಾನ,ಯೋಗಪಟ್ಟಾಭಿಷೇಕ ದಿನಾಚರಣೆ ಮತ್ತು ಮಹಾಪಾದುಕಾ ಪೂಜೆ-ಸಮಾಲೋಚನಾ ಸಭೆ
0
ಮಾರ್ಚ್ 11, 2019
ಬದಿಯಡ್ಕ: ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೆಯ ಸಂನ್ಯಾಸಗ್ರಹಣ ದಿನಾಚರಣೆಯ ಅಂಗವಾಗಿ " ಜೀವನದಾನ " ಹಾಗೂ 26ನೆಯ ಯೋಗಪಟ್ಟಾಭಿಷೇಕ ದಿನಾಚರಣೆಯ ಅಂಗವಾಗಿ " ಮಹಾಪಾದುಕಾಪೂಜೆ " ಸಮಾರಂಭವು ಶ್ರೀರಾಮಚಂದ್ರಾಪುರಮಠ ಪೆರಾಜೆ, ಮಾಣಿಯಲ್ಲಿ ಏ. 9 ಮತ್ತು 11 ರಂದು ನಡೆಯಲಿದ್ದು,
ಈ ಬಗ್ಗೆ ಮುಳ್ಳೇರಿಯಾ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಭಾನುವಾರ ನಡೆಯಿತು.
ಧ್ವಜಾರೋಹಣ ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾದ ಸಭೆಯಲ್ಲಿ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು ಇವರು ಸಮಾರಂಭದ ವಿಶೇಷತೆ ಮತ್ತು ಮಹತ್ವದ ಬಗ್ಗೆ ವಿವರಣೆಗಳನ್ನಿತ್ತರು.
ಜೀವನದಾನ ಮತ್ತು ಯೋಗ ಪಟ್ಟಾಭಿಷೇಕದಿನ ಆಯೋಜನ ಸಮಿತಿಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್ ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಸ್ವರೂಪದ ಸಮಗ್ರ ಮಾಹಿತಿಗಳನ್ನಿತ್ತು ಸಮಾಜದ ಪ್ರತೀ ಮನೆ ಮನೆಗಳಲ್ಲಿ ಶ್ರೀ ಪಾದುಕಾ ಪ್ರಸಾದ ತಲಪುವಂತಾಗಿ ಸಮಾಜ ಸಮೃದ್ಧಿಯಾಗಲು ಶ್ರೀ ಸಂಸ್ಥಾನದವರ ಸಂಕಲ್ಪವನ್ನು ಸಾಕ್ಷಾತ್ಕಾರ ಮಾಡುವಲ್ಲಿ ಪ್ರತಿಯೊಬ್ಬನ ಸಹಕಾರ ಅನಿವಾರ್ಯ ಎಂಬುದಾಗಿ ನುಡಿದರು.
ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್ ಮೊಗ್ರ ಸಮಾರಂಭದ ಯಶಸ್ವಿ ಮತ್ತು ಮಹಾಪಾದುಕಾಪೂಜೆಯ ಪಾವಿತ್ರ್ಯತೆ ಮತ್ತು ವಿಶೇಷತೆ ಬಗ್ಗೆ ಮಾತುಗಳನ್ನಾಡಿದರು. ಪ್ರೊ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಪದಾಧಿಕಾರಿಗಳಾದ ಮಹೇಶ ಸರಳಿ , ಸತ್ಯಶಂಕರ ಭಟ್ , ಕೇಶವಪ್ರಸಾದ ಎಡಕ್ಕಾನ, ವೈ ಕೆ ಗೋವಿಂದ ಭಟ್, ಕುಸುಮಾ ಪೆರ್ಮುಖ, ಗೀತಾಲಕ್ಷ್ಮಿ ಮುಳ್ಳೇರಿಯಾ ಮತ್ತು ಜಯಪ್ರಕಾಶ್ ಪಜಿಲ ಉಪಸ್ಥಿತರಿದ್ದರು.
ಜೀವನದಾನ :
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಇಪ್ಪತ್ತಾರನೆಯ ಸಂನ್ಯಾಸಗ್ರಹಣ ದಿನಾಚರಣೆ
ಸಂಕಷ್ಟಕ್ಕೆ ಒಳಗಾದ ಕುಟುಂಬವನ್ನು ಶ್ರೀ ಮಠದ ಜೀವನದಾನ ಟ್ರಸ್ಟ್ ಮೂಲಕ ದತ್ತು ಸ್ವೀಕೃಸುವ ವಿಧಾನದಲ್ಲಿ ಜೀವನದಾನವಾಗಿ ಏ.09 ರಂದು ಆಚರಿಸಲಾಗುತ್ತದೆ. ಇಪ್ಪತ್ತಾರನೆಯ ಯೋಗಪಟ್ಟಾಭಿಷೇಕ ದಿನಾಚರಣೆಯನ್ನು ಸಹಸ್ರ-ಸಹಸ್ರ ಶಿಷ್ಯ-ಭಕ್ತರ ಭಕ್ತಿಯ ಸಮರ್ಪಣೆಯಾಗಿ " ಮಹಾಪಾದುಕಾಪೂಜೆ " ಉಪಾಸನೆ ಏ.11 ರಂದು ಆಚರಿಸಲಾಗುತ್ತದೆ.




