ಕಾಸರಗೋಡು: ಬದುಕಿನಲ್ಲಿ ಕೃತಾರ್ಥತೆಯನ್ನು ಪಡೆಯುವಲ್ಲಿ ಪ್ರಬಲ ಇಚ್ಚಾಶಕ್ತಿಯ ಬಲ ಪ್ರತಿಯೊಬ್ಬನಲ್ಲೂ ಇರಬೇಕು. ಸಾಮಾಜಿಕ ಸ್ಥಿತ್ಯಂತರದ ಸಂಘರ್ಷವನ್ನು ಸುಲಲಿತಗೊಳಿಸುವಲ್ಲಿ ವಿವಿಧ ಕ್ಷೇತ್ರಗಳ ಕಲಾವಿದರು ತಮ್ಮದೇ ಕೊಡುಗೆಗಳ ಮೂಲಕ ಮಹತ್ತರವಾದ ಕೊಡುಗೆಗಳನ್ನು ನೀಡುತ್ತಿದ್ದು, ಸಮಾಜಕ್ಕೆ ಕಲಾವಿದರ ಋಣ ಇದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಭಿಯಂತರ ಅರುಣ್ ಕುಮಾರ್ ಅವರು ತಿಳಿಸಿದರು.
ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಓಫ್ ಕೇರಳ(ಸವಾಕ್)ನ ನೂತನ ಜಿಲ್ಲಾ ಕಾರ್ಯಲಯವನ್ನು ಭಾನುವಾರ ಕೋಟೆಕಣಿ ರಸ್ತೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಕೊಡುಗೆಗಳನ್ನು ನೀಡುವ ಸಾಕಷ್ಟು ಅವಕಾಶಗಳಿರುತ್ತವೆ. ಆದುದರಿಂದ ವಿವಿಧ ಕ್ಷೇತ್ರದಲ್ಲಿ ದುಡಿಯುವವರು ಆಯಾ ವಿಭಾಗಗಳಿಗೆ ಸಂಬಂಧಿಸಿ ಏನಾದರೊಂದು ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಉದಾರ ಮನಸ್ಸಿನವರಾಗಿರಬೇಕು.ಇದು ಯಶಸ್ಸನ್ನು ಉಂಟುಮಾಡುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಾಕ್ ಜಿಲ್ಲಾಧ್ಯಕ್ಷ, ರಂಗ ನಿರ್ದೇಶಕ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ಮಾತನಾಡಿ ಗಡಿನಾಡು ಕಾಸರಗೋಡಿನ ಅಸಂಖ್ಯಾತ ಕಲಾವಿದರು ಮತ್ತು ಕಲಾ ಕ್ಷೇತ್ರದ ಇನ್ನಿತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವರನ್ನು ಒಗ್ಗೂಡಿಸುವಲ್ಲಿ, ಅರ್ಹ ನೆರವನ್ನು ನೀಡುವಲ್ಲಿ ಸವಾಕ್ ಕೃತಾರ್ಥತೆ ಹೊಂದಿದೆ ಎಂದು ತಿಳಿಸಿದರು. ರಾಜ್ಯ ಸಾಂಸ್ಕøತಿಕ ಇಲಾಖೆಯಲ್ಲಿ ತೆಂಕಣ ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನ ಗಳಿಸಿಕೊಡುವಲ್ಲಿ ಸವಾಕ್ ಅಹರ್ನಿಶಿ ಹೋರಾಡಿದೆ ಎಂದ ಅವರು ಅಶಕ್ತ ಕಲಾವಿದರಿಗೆ ಲಭ್ಯವಾಗುವ ಪಿಂಚಣಿಯನ್ನು ಇನ್ನು ಮುಂದೆ ಯಕ್ಷಗಾನ ಕಲಾವಿದರೂ ಪಡೆಯಲಿದ್ದಾರೆ ಎಂದು ತಿಳಿಸಿದರು.
ಸವಾಕ್ ಜಿಲ್ಲಾ ಮಹಿಳಾ ಘಟಕಾಧ್ಯಕ್ಷೆ ಜಯಶ್ರೀ ಕಾರಡ್ಕ, ಕಾರ್ಯದರ್ಶಿ ಜಯಂತಿ ಸುವರ್ಣ, ಮೋಹಿನಿ ಕಾರಡ್ಕ, ಭಾರತೀ ಬಾಬು ಕಾಸರಗೋಡು, ಸವಾಕ್ ವಿವಿಧ ವಲಯ ಘಟಕಗಳ ಪ್ರಮುಖರಾದ ಮಧುಸೂದನ ಬಲ್ಲಾಳ್ ನಾಟೆಕಲ್ಲು, ಯಾ ಪಿಲಿಕುಂಜೆ, ಗೋವಿಂದ ಮಾರಾರ್ ಕಾಂಞÂಂಗಾಡ್, ಗಂಗಾಧರನ್ ನೀಲೇಶ್ವರ, ರಾಧಾ ಮುರಳೀಧರ್, ಚಂದ್ರಹಾಸ ಕೈಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು.
ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಸ್ವಾಗತಿಸಿ, ಭಾರತೀ ಬಾಬು ವಂದಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಸವಾಕ್ ಸದಸ್ಯರಿಂದ ಗಾಯನ ಕಾರ್ಯಕ್ರಮ ನಡೆಯಿತು. ಬಳಿಕ ಸವಾಕ್ ಜಿಲ್ಲಾ ಮಹಿಳಾ ಘಟಕದ ಸಭೆ ಮತ್ತು ವಿವಿಧ ವಲಯ ಮಟ್ಟದ ಪದಾಧಿಕಾರಿಗಳ ಸಭೆ ನಡೆಯಿತು.


