ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗುರುಪೀಠ ಪ್ರತಿಷ್ಠೆಯ ವಾರ್ಷಿಕ ದಿನಾಚರಣೆ ಆ.29 ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಗಣಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ರಂಗಪೂಜೆ ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಭಾರತ ಸರಕಾರದ ಆಯುಷ್ ಖಾತೆ ಸಚಿವ ಹಾಗೂ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ರವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದ.ಕ. ಲೋಕಸಭಾ ಸದಸ್ಯ, ಬಿ,ಜೆ.ಪಿ. ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕೊಯಂಬತ್ತೂರಿನ ಆಯುರ್ವೇದ ಫಾರ್ಮಸಿಯ ಆಡಳಿತ ನಿರ್ದೇಶಕ ಪದ್ಮಶ್ರೀ ಡಾ. ಪಿ.ಆರ್. ಕೃಷ್ಣಕುಮಾರ್, ನಿಟ್ಟೆ ಸಮೂಹ ಸಂಸ್ಥೆಗಳ ಕುಲಪತಿ ಡಾ. ವಿನಯ್ ಹೆಗ್ಡೆ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರಿನ ಕರ್ನಾಟಕ ಬ್ಯಾಂಕಿನ ಪ್ರಧಾನ ಕಛೇರಿಯ ನಿರ್ವಾಹಕ ನಿರ್ದೇಶಕ ಮಹಾಬಲೇಶ್ವರ ರಾವ್, ಬೆಂಗಳೂರಿನ ತೇಜೂಮಸಾಲದ ಆಡಳಿತ ಪಾಲುದಾರರಾದ ವಿ.ಸುಬ್ರಹ್ಮಣ್ಯ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ, ನ್ಯಾಯವಾದಿಗಳಾದ ಕೆ.ಶ್ರೀಕಾಂತ್, ಮಂಗಳೂರು ನೆತ್ತಿಲ, ಉದ್ಯಮಿ ಸೀತಾರಾಮ ಶೆಟ್ಟಿ ಮತ್ತು ನಿತ್ಯಾನಂದ ಯೋಗಾಶ್ರಮದ ಮುಂಬಯಿ ಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್ ಕೋಟ್ಯಾನ್ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕೆಂದು ಆಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


