ಮಂಜೇಶ್ವರ: ಹಿರಿಯ ಯಕ್ಷಗಾನ ಸಂಘಟಕ ಸತೀಶ ಅಡಪ ಸಂಕಬೈಲು ಅವರ ಸಂಚಾಲಕತ್ವದ ಯಕ್ಷಬಳಗ ಹೊಸಂಗಡಿ ಸಂಘವು ಕಳೆದ 27ವರ್ಷಗಳಿಂದ ವಾರ್ಷಿಕ ಅಷಾಡಮಾಸ ಸರಣಿ ಯಕ್ಷಗಾನ ಕೂಟಗಳನ್ನು ನಡೆಸುತ್ತಾ ಬರುತ್ತಿದ್ದು ಸಮಾರೋಪದಂದು ನಾಡಿನ ಹಿರಿಯ ಕಲಾವಿದರೋರ್ವರನ್ನು ಸಮ್ಮಾನಿಸಿ ಗೌರವಿಸುತ್ತಾ ಬಂದಿದೆ. ಈ ಬಾರಿಯ 28ನೇ ವರ್ಷದ ಆಷಾಡ ಕೂಟ ಸಮಾರೋಪ ಸಮಾರಂಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ಸಂಭ್ರಮದಿಂದ ಸಮಾರೋಪಗೊಂಡಿತು. ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ಈ ಬಾರಿಯ ವಾರ್ಷಿಕ ಸಮ್ಮಾನ ಗಣ್ಯರ ಸಮಕ್ಷಮ ನಡೆಯಿತು.
ಸಮಾರೋಪ ಸಮಾರಂಭ ಹಾಗೂ ಸಮ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಸಂತ ಭಟ್ ತೊಟ್ಟೆತ್ತೋಡಿ ವಹಿಸಿದ್ದು ರಾಮಚಂದ್ರ ರಾವ್ ಕಡಂಬಾರು, ಗೋವಿಂದ ಹೆಗ್ಡೆ ಬೆಜ್ಜ, ಡಾ.ರಾಜೇಶ ಬೆಜ್ಜಂಗಳ, ನಾರಾಯಣ ನಾೈಕ್ ನಡುಹಿತ್ಲು ಉಪಸ್ಥಿತರಿದ್ದರು. ರಾಜಾರಾಮ ರಾವ್ ಮೀಯಪದವು ಅಭಿನಂದನಾ ನುಡಿ ಗಳನ್ನಾಡಿದರು. ನಾಗರಾಜ ಪದಕಣ್ಣಾಯ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಸತೀಶ ಅಡಪ ಸಂಕಬೈಲು ಸ್ವಾಗತಿಸಿ, ನ್ಯಾಯವಾದಿ ವಿಠಲ ಭಟ್ ಮೊಗಸಾಲೆ ವಂದಿಸಿದರು.
ಸಮಾರೋಪದ ಅಂಗವಾಗಿ `ಸತ್ವ ಪರೀಕ್ಷೆ' ಯಕ್ಷಗಾನ ತಾಳಮದ್ದಳೆ ಜರಗಿತು. ನಾಡಿನ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರತ್ನಾಕರ ಆಳ್ವ ತಲಪಾಡಿ ಹಾಗೂ ಚೆಂಡೆ ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ ಹಾಗೂ ಶುಭಚರಣ ತಾಳ್ತಜೆ ಹಾಗೂ ಪಾತ್ರವರ್ಗದಲ್ಲಿ ರಾಧಾಕೃಷ್ಣ ಕಲ್ಚಾರ್, ದಿನೇಶ ಶೆಟ್ಟಿ ಕಾವಳ ಕಟ್ಟೆ, ಸತೀಶ ಅಡಪ ಸಂಕಬೈಲು, ನಾಗರಾಜ ಪದಕಣ್ಣಾಯ, ವಿಠಲ ಭಟ್ ಮೊಗಸಾಲೆ, ರಾಮಕೃಷ್ಣ ಭಟ್ ಕೋಳ್ಯೂರು ಭಾಗವಹಿಸಿದರು.


