ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾಚರಣೆಯು ಜು.25 ರಿಂದ ಸ.14ರ ವರೆಗೆ ಎಡನೀರು ಶ್ರೀಸಂಸ್ಥಾನದಲ್ಲಿ ನಡೆಯುತ್ತಿದ್ದು, ಆ.25 ರಿಂದ ಪ್ರತಿನಿತ್ಯ ಸಂಜೆ 7 ರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಆ.25 ರಂದು ಭಾನುವಾರ ಶ್ರೀಗಳ ನಿರ್ದೇಶನದಲ್ಲಿ ಪಾರ್ಥ ಸಾರಥ್ಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಡನೀರು ಶ್ರೀಗಳ ಭಾಗವತಿಕೆ ಮತ್ತು ನಿರ್ದೇಶನ, ಸೀತಾರಾಮ ತೋಲ್ಪಡಿತ್ತಾಯ, ಜನಾರ್ದನ ತೋಲ್ಪಡಿತ್ತಾಯ ಚೆಂಡೆ-ಮದ್ದಳೆಯಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ಡಾ.ರಮಾನಂದ ಬನಾರಿ, ಉಡುವೆಕೋಡಿ ಸುಬ್ಬಪ್ಪಯ್ಯ, ಸುರೇಶ ಕುದ್ರೆಂತಾಯ, ರಾಜೇಂದ್ರ ಕಲ್ಲೂರಾಯ ಪಾತ್ರಗಳನ್ನು ನಿರ್ವಹಿಸಿದರು.
ಸೋಮವಾರ ಪುತ್ತೂರಿನ ನಾಟ್ಯರಂಗದ ವಿದುಷಿಃ ಮಂಜುಳಾ ಸುಬ್ರಹ್ಮಣ್ಯ ಮತ್ತು ತಂಡದವರಿಂದ ನೃತ್ಯಸಂಧ್ಯಾ ನಡೆಯಿತು. ಮಂಗಳವಾರ ಲಕ್ಷ್ಮಣಕುಮಾರ್ ಮರಕಡ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ನಡೆಯಿತು.
ಇಂದು(ಆ.28) ಶ್ರೀಎಡನೀರು ಮಠಾಧೀಶರ ನಿರ್ದೇಶನದಲ್ಲಿ ಎಡನೀರು ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯವರಿಂದ ಸುದರ್ಶನ-ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆ.29 ರಂದು ಲಯ ಲಹರಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಎಂ.ಕೆ.ಪ್ರಾಣೇಶ್ ಬೆಂಗಳೂರು(ಕೊಳಲು), ವಿದ್ವಾನ್ ವಿ.ಎಸ್.ಯಶಸ್ವಿ ಬೆಂಗಳೂರು(ಪಿಟೀಲು), ವಿದ್ವಾನ್ ಅನೂರು ಅನಂತಕೃಷ್ಣ ಶರ್ಮ ಬೆಂಗಳೂರು ಮತ್ತು ಶಿಷ್ಯವೃಂದದವರಿಂದ ತಾಳವಾದ್ಯ ಪ್ರದರ್ಶನ ನಡೆಯಲಿದೆ.


