ಮಂಜೇಶ್ವರ: ಮಹಾತ್ಮಾ ಗಾಂಧೀಜಿ ಸಹನೆ ಮತ್ತು ಶಾಂತಿಯ ಸಾಕಾರಮೂರ್ತಿ, ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡ ಅವರ ಹೋರಾಟಗಳು ಇಂದಿಗೂ ಪ್ರಪಂಚಕ್ಕೆ ಮಾದರಿ ಎನಿಸಿವೆ. ಪ್ರಸ್ತುತ ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲೂ ಗಾಂಧೀಜಿಯ ತತ್ವ ಚಿಂತನೆಗಳು ಆದರ್ಶಪೂರ್ಣವಾಗಿವೆ ಎಂದು ಮೀರತ್ತಿನ ಶೋಭಿತ್ ವಿಶ್ವವಿದ್ಯಾನಿಲಯದ ಕುಲಪತಿ ಕುನ್ವರ್ ಶೇಖರ್ ವಿಜೇಂದ್ರ ಹೇಳಿದರು.
ಮಂಜೇಶ್ವರದ ವಿನೋಬಾಜಿ ನಗರದ ಕಲಾಸ್ಪರ್ಶಂ ಸಭಾಂಗಣದಲ್ಲಿ ವಿನೋಬಾ ವೆಂಕಟೇಶ್ವರ ರಾವ್ ಶಾಂತಿ ಸೇನಾ ಫೌಂಡೇಶನ್, ಗಾಂಧಿ ಸ್ಮøತಿ ಮತ್ತು ಗಾಂಧಿ ದರ್ಶನ ಸಮಿತಿ ಜಿಂಟಿಯಾಗಿ ಹಮ್ಮಿಕೊಂಡ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯ 150 ನೇ ವರ್ಷದ ಸ್ಮರಣೆ ಮತ್ತು ವಿಕೋಪ ನಿರ್ವಹಣೆಯಲ್ಲಿ ಯುವಕರ ಪಾತ್ರ ಎಂಬ ವಿಷಯಗಳಲ್ಲಿ ನಡೆದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾತ್ಮಾ ಗಾಂಧಿ ಭಾರತ ದೇಶಕ್ಕಷ್ಟೇ ಸೀಮಿತವಾಗಿರದೆ ವಿಶ್ವಕ್ಕೆ ಮಾರ್ಗದರ್ಶಕರಾದವರು. ಸತ್ಯ, ಶಾಂತಿ, ಅಹಿಂಸೆ ಮಂತ್ರಗಳೊಂದಿಗೆ ದೇಶವನ್ನು ಶತಮಾನಗಳ ದಾಸ್ಯದಿಂದ ವಿಮುಕ್ತಿಗೊಳಿಸಿದ ಮಹಾನ್ ಚೇತನ ಎಂದರು.
ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಮಹಾತ್ಮಾ ಗಾಂಧೀಜಿಯವರ 150 ನೇ ವರ್ಷಾಚರಣೆಯು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ವಿಶ್ವದೆಲ್ಲೆಡೆ ಆಚರಿಸಲ್ಪಡುತ್ತಿರುವ ಶಾಂತಿ ಸಹಬಾಳ್ವೆಯ ವರ್ಷಾಚರಣೆಯಾಗಿದೆ. ದೇಶದ ಜನಸಾಮಾನ್ಯನನ್ನು ಪ್ರೀತಿಸಿ, ಆತನ ಅಂತಃಕರಣ ಅರ್ಥೈಸಿ ಜನಸ್ನೇಹಿ ಎನಿಸಿಕೊಂಡ ವ್ಯಕ್ತಿ ಮಹಾತ್ಮಾ ಗಾಂಧಿ. ಓರ್ವ ಸಂತ ಫಕೀರನಾಗಿ ಹಲವು ಸತ್ಯಾಗ್ರಗಳಿಗೆ ಮುಂದಾಳುತ್ವ ನೀಡಿದ ಮಹಾನ್ ಚೇತನ ಮಹಾತ್ಮಾ ಗಾಂಧೀಜಿ ಪ್ರಕೃತಿ ಮತ್ತು ಪರಿಸರ ಪ್ರೇಮಿಯೂ ಆಗಿದ್ದರು. ಎಲ್ಲರೂ ಪ್ರೀತಿಸಬಹುದಾಗಿದ್ದ ವ್ಯಕ್ತಿತ್ವ ಶಕ್ತಿಯನ್ನು ಹೊಂದಿದ್ದ ಮಹಾತ್ಮಾಗಾಂಧೀ ದೇಶದ ಭ್ರಾತೃತ್ವ ಮತ್ತು ಜಾತ್ಯಾತೀತ ಮೌಲ್ಯಗಳಿಗೆ ಪ್ರೇರಣೆಯಾದವರಾಗಿದ್ದಾರೆ, ಆಚಾರ್ಯ ವಿನೋಬಾ ಭಾವೆಯವರು ಅಹಿಂಸಾವಾದಿಯಾಗಿದ್ದು, ಮಾನವ ಹಕ್ಕುಗಳಿಗಾಗಿ ಹೋರಾಡಿದ ಭಾರತ ದೇಶ ಕಂಡ ಅಪ್ರತಿಮರಲ್ಲಿ ಓರ್ವರು ಎಂದು ಸ್ಮರಿಸಿದರು. ಇಂದು ದೇಶದಲ್ಲಿ ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ವ್ಯಕ್ತಿಯನ್ನು ವೈಭವೀಕರಿಸುವ ಕಾಲಘಟ್ಟ ನಿರ್ಮಾಣವಾಗಿರುವುದು ಖೇದಕರವಾಗಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಹಲವು ಭಾಗಗಳಲ್ಲಿ ನಡೆದ ಪ್ರಾಕೃತಿಕ ವಿಕೋಪಗಳ ಬಗ್ಗೆ ಪ್ರಸ್ತಾಪಿಸಿದ ಅವರು ಪ್ರಕೃತಿ ಮುನಿದರೆ ಮನುಷ್ಯ ಏನೂ ಇಲ್ಲ. ಬಹಳ ಹಿಂದಿನಿಂದಲೂ ಜನಸಮೂಹವು ಪ್ರಕೃತಿಯನ್ನು ನಮಿಸಿ, ಪೂಜಿಸುತ್ತಿದೆ. ಆದರೆ ಪ್ರಸ್ತುತ ಆಧುನೀಕರಣದ ಕಾಲಘಟ್ಟದಲ್ಲಿ ಮಳೆಕಾಡಗಳನ್ನು ನಾಶ ಮಾಡಿದ ಮನುಷ್ಯನಿಗೆ ಪ್ರಕೃತಿಯೇ ಪರೋಕ್ಷ ಪಾಠ ಕಲಿಸುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದಶಕಗಳ ಹಿಂದೆ ಮಾಧವ ಗಾಡ್ಗೀಳ್ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಮಂಡಿಸಿದ ವರದಿ, ಕಸ್ತೂರಿರಂಗನ್ ವರದಿಗಳನ್ನು ಪಾಲಿಸುವಂತಾಗಬೇಕು ಎಂದರು.
ಕ್ಷಮೆ, ಸಹನೆ ಮತ್ತು ಶಾಂತಿಯ ಗುಣಗಳನ್ನು ಪ್ರತಿಯೊಬ್ಬ ಮನುಷ್ಯನು ಅಳವಡಿಸಿಕೊಳ್ಳಬೇಕು ಆ ಮೂಲಕ ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಯಿಂದ ಸಂಸ್ಕಾರ, ಸಂಸ್ಕಾರದಿಂದ ಸಮಾಜ, ಸಮಾಜದಿಂದ ರಾಷ್ಟ್ರ, ರಾಷ್ಟ್ರದಿಂದ ವಿಶ್ವ ಭ್ರಾತೃತ್ವ ಸೃಷ್ಠಿಯಾಗಬೇಕಿದೆ. ಮಹಾತ್ಮನ ಹಾದಿಯಲ್ಲಿ ಮುನ್ನಡೆಯೋಣ, ಪ್ರಕೃತಿಯನ್ನು ಪ್ರೀತಿಸೋಣ, ನಾವು ಬದುಕಿ ಇತರರ ಏಳಿಗೆಗೂ ಪೂರಕ ವಾತಾವರಣ ಸೃಷ್ಠಿಸೋಣ ಎಂದರು.
ಈ ಸಂದರ್ಭ ಡಾ.ಅನೂಪ್ ಸ್ವರೂಪ್ ಬರೆದ 'ಗಿವ್ ನಾನ್ ಕಿಲ್ಲಿಂಗ್ ಎ ಚಾನ್ಸ್' ಎಂಬ ಆಂಗ್ಲ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಗಾಂಧೀ ಪೀಸ್ ಮಿಶನ್ ಅಧ್ಯಕ್ಷ ಡಾ.ರಾಧಾಕೃಷ್ಣನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಮೂರು ಮಂದಿ ಹಿರಿಯ ಶಾಂತಿ ಸೈನಿಕರನ್ನು ಗೌರವಿಸಲಾಯಿತು. ಶಾಂತಿ ಸೇನಾದ ಪ್ರಧಾನ ಸಂಯೋಜಕ ಹರ್ಷಾದ್ ವರ್ಕಾಡಿ ಸ್ವಾಗತಿಸಿದರು. ರಂಜಿತ್ ಸರ್ಕಾರ್ ಧನ್ಯವಾದಗೈದರು.
ಹರಿಜನ ಸೇವಕ ಸಂಘದ ಅಧ್ಯಕ್ಷ ಪ್ರೊ.ಶಂಕರ ಕುಮಾರ್ ಸಾನ್ಯಾಲ್, ಭೋಪಾಲದ ಜಾಗರಣ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಅನೂಪ್ ಸ್ವರೂಪ್, ಸ್ವಾಮಿ ವಿವಿಕ್ತಾನಂದ ಸರಸ್ವತಿ, ಸಯ್ಯಿದ್ ಅತಾವುಲ್ಲಾ ತಂಙಳ್, ರೆ.ಫಾ. ವಿನ್ಸೆಂಟ್ ವಿನೋದ್ ಸಲ್ದಾನ ಶಾಂತಿ ಸಂದೇಶ ನೀಡಿದರು. ಮಾರಾರಿಕುಳಂ ಗಾಂಧೀ ಕೇಂದ್ರದ ಅಧ್ಯಕ್ಷ ರವಿ ಪಾಲತ್ತಿಲ್, ರಮೇಶ್ ಶರ್ಮಾ, ಎಸ್.ಜೆ ದಿವಾಕರ, ಉಮ್ಮರ್ ಬೋರ್ಕಳ, ಆರ್.ಪಿ ರವೀಂದ್ರ, ಡಾ.ಶಿವನ್ ಅರುಣಾಚಲಂ, ಎಂ.ಜೆ ಕಿಣಿ, ಡಾ.ವಿ.ರಘು, ಪ್ರೊ.ವಿ.ಗೋಪಿನಾಥನ್, ಡಾ.ಆರ್ ಮಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್, ವಿ.ವಿ ಪ್ರಭಾಕರನ್, ಡಾ.ಎಂ.ಎಸ್ ಜಾನ್, , ಮಂಜೇಶ್ವರ ಬ್ಲಾ.ಪಂ ಉಪಾಧ್ಯಕ್ಷೆ ಮಮತಾ ದಿವಾಕರ್, ಕೇರಳ ಕೇಂದ್ರೀಯ ವಿ.ವಿ ಸಹಾಯಕ ಉಪ ಕುಲಪತಿ ಜಯಪ್ರಸಾದ್, ಕೇರಳ ಕೇಂದ್ರೀಯ ವಿ.ವಿ ಕೇಂದ್ರೀಯ ಕುಲಸಚಿವ ಡಾ.ಎ.ರಾಧಾಕೃಷ್ಣನ್ ಮೊದಲಾದವರಿದ್ದರು.
ಇಂದು ಸಮಾಪ್ತಿ:
ಶಾಂತಿ ಸೇನಾ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ದ್ವಿದಿನ ರಾಷ್ಟ್ರೀಯ ಕಾರ್ಯಾಗಾರವು ಇಂದು ಸಮಾರೋಪಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ಕೇರಳ ಸಂಸ್ಕøತಿ ಇಲಾಖೆ ಸಚಿವ ಎ.ಕೆ ಬಾಲನ್ ಉದ್ಘಾಟಿಸಲಿದ್ದಾರೆ. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಉಳ್ಳಾಲ ಶಾಸಕ ಯು.ಟಿ. ಖಾದರ್, ಮಂಜೇಶ್ವರ ಬ್ಲಾ.ಪಂ ಅರ್ಧಯಕ್ಷ ಎ.ಕೆ.ಎಂ ಅಶ್ರಫ್, ಕಾಸರಗೋಡು ಜಿ.ಪಂ ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಸಕೀರ್ ಅಹಮ್ಮದ್, ಡಾ.ಡಿ.ಸುರೇಂದ್ರನಾಥ್, ಡಾ.ಆರ್.ಮಣಿ ಭಾಗವಹಿಸಲಿದ್ದಾರೆ.



