ಕಾಸರಗೋಡು: ಕರ್ನಾಟಕ ರಾಜ್ಯೋತ್ಸವ ದಿನದಂದು ಕಾಸರಗೋಡಿನಲ್ಲಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಕನ್ನಡಿಗರು `ಹಕ್ಕು ಸಂರಕ್ಷಣಾ' ದಿನಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
ನ.1 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕರಂದಕ್ಕಾಡ್ನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಈ ಸಂಬಂಧ ಧರಣಿ ಸತ್ಯಾಗ್ರಹ ನಡೆಯಲಿದೆ.
ಕರ್ನಾಟಕದಿಂದ ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಂಡ ಕಾಸರಗೋಡಿನ ಕನ್ನಡಿಗರು ನಿರಂತರವಾಗಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇರಳ ಸರ್ಕಾರ ಕನ್ನಡ ಭಾಷಿಗರನ್ನು ಹತ್ತಿಕ್ಕಲು ವಿವಿಧ ಕುತಂತ್ರಗಳನ್ನು ನಡೆಸುತ್ತಲೇ ಬಂದಿದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ನೀಡಲಾದ ಸಂವಿಧಾನಬದ್ಧ ಹಕ್ಕನ್ನು ಕಾಪಾಡುವ ಮತ್ತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಹಕ್ಕು ಸಂರಕ್ಷಣಾ ದಿನಾಚರಣೆ ಆಯೋಜಿಸಲು ಕನ್ನಡ ಹೋರಾಟ ಸಮಿತಿ ತೀರ್ಮಾನಿಸಿದೆ.
ಬೇಕಲ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಜ್ಞಾನವಿಲ್ಲದ ಅಧ್ಯಾಪಕರ ನೇಮಕವನ್ನು ಪ್ರತಿಭಟಿಸಿ ಈ ಶಾಲೆಗಳ ವಿದ್ಯಾರ್ಥಿಗಳು, ಪೆÇೀಷಕರು ನಡೆಸಿದ ಹೋರಾಟ, ಅದಕ್ಕೆ ಬೆಂಬಲವಾಗಿ ನಿಂತ ಕನ್ನಡ ಹೋರಾಟ ಸಮಿತಿ ಮತ್ತು ಕನ್ನಡ ವಿದ್ಯಾರ್ಥಿ ಸಂರಕ್ಷಣೆ ಸಮಿತಿಯ ತೀವ್ರ ಹೋರಾಟದಿಂದ ಅಧ್ಯಾಪಕರನ್ನು ರಜೆಯಲ್ಲಿ ತೆರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಮಾಯಿಪ್ಪಾಡಿಯ ಟಿಟಿಸಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಕಾಸರಗೊಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು.
ಸಭೆಯಲ್ಲಿ ಮಹಾಲಿಂಗೇಶ್ವರ ಭಟ್, ಶಂಕರನಾರಾಯಣ ಭಟ್, ಕೆ.ವಿಶ್ವನಾಥ ರಾವ್, ಎಸ್.ವಿ.ಭಟ್, ವಾಸುದೇವ, ಜಯ ಕುಮಾರ್, ಡಾ.ಯು.ಮಹೇಶ್ವರಿ ಮೊದಲಾದವರು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಭಾಸ್ಕರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಮಾಸ್ತರ್ ಕೂಡ್ಲು ವಂದಿಸಿದರು.

