ಕಾಸರಗೋಡು: ರಾಜ್ಯದ ವಿಶೇಷತೆಯಾಗಿರುವ ಆರೋಗ್ಯ ಸಂಸ್ಕೃತಿ ಮತ್ತು ಆಯುರ್ವೇದ ಚಿಕಿತ್ಸೆ ಬಗ್ಗೆ ಬಾಹ್ಯಜಗತ್ತಿನೊಂದಿಗೆ ಸಂವಾದ ನಡೆಸುವ ನಿಟ್ಟಿನಲ್ಲಿ ಅವಕಾಶವೊಂದು ತೆರೆದುಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಆಯುರ್ವೇದ ಅಂಬಾಸಿಡರ್ ಗಳ ಯಾತ್ರೆಯೊಂದು ಈ ನಿಟ್ಟಿನಲ್ಲಿ ವೇದಿಕೆ ಸಿದ್ಧಪಡಿಸಲಿದೆ. ಅ.25ರಂದು ಜಿಲ್ಲೆಯ ಐತಿಹಾಸಿಕ ಮಹತ್ವಿಕಯ ನಾಡು ಬೇಕಲದಿಂದ ಆರಂಭಗೊಂಡು ರಾಜ್ಯದ ನೈಸರ್ಗಿಕ ಸಂಪತ್ತಿನನಾಡು ಕೋವಳಂನಲ್ಲಿ ಸಮಾಪ್ತಿಗೊಳ್ಳುವ ಯಾತ್ರೆ ಇದಾಗಿದೆ.
ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿ.ಆರ್.ಡಿ.ಸಿ. ಆಡಳಿತೆ ನಿರ್ದೇಶಕ ಟಿ.ಕೆ.ಮನ್ಸೂರ್ ಈ ವಿಚಾರ ತಿಳಿಸಿದರು.
ಜರ್ಮನಿ, ಇಟೆಲಿ, ಚೀನಾ, ರಷ್ಯಾ, ಯೂಕ್ರೇನ್, ಲೆಬೆನಾನ್, ಸೌದಿ ಅರೇಬಿಯಾ, ಡೆನ್ಮಾರ್ಕ್, ಪೋಲೆಂಡ್, ಸ್ಪೇನ್, ಇಸ್ರೇಲ್, ಯು.ಎ.ಇ., ತಾಯ್ ಲ್ಯಾಂಡ್, ಸೌತ್ ಕೊರಿಯಾ, ಮಲೇಷ್ಯಾ ಸಹಿತ ಸುಮಾರು 30 ದೇಶಗಳ 45 ಟೂರ್ ಆಪರೇಷನ್ ಕಂಪನಿಗಳ ಪ್ರತಿನಿಧಿಗಳು ರಾಜ್ಯವನ್ನು ಸಂದರ್ಶಿಸಲಿದ್ದಾರೆ.
ಕೇಂದ್ರ-ರಾಜ್ಯ ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ ರಾಜ್ಯ ಮಟ್ಟದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ. ಕೇರಳದ ವಿವಿಧ ಆಯುರ್ವೇದ ಸಂಸ್ಥೆಗಳ ಸಂಘಟನೆಯಾಗಿರುವ ಆಯುರ್ವೇದ ಪ್ರಮೋಷನ್ ಸೊಸೈಟಿ(ಎ.ಪಿ.ಎಸ್.) ನೇತೃತ್ವ ವಹಿಸಿ ಕಾರ್ಯಕ್ರಮನಡೆಸುತ್ತಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ಬೇಕಲ ರೆಸಾರ್ಟ್ ಡೆವೆಲಪ್ ಮೆಂಟ್ ಕಾರ್ಪ ರೇಷನ್(ಬಿ.ಆರ್.ಡಿ.ಸಿ.)ನೇತೃತ್ವದಲ್ಲಿ ಉತ್ತರ ಮಲಬಾರ್ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೋಯಿಕೋಡ್,ಕೋಟಕ್ಕಲ್, ಚೆರುತುರ್ತಿ, ಎರ್ನಾಕುಲಂ, ಕುಮರಕಂ, ಕೊಲ್ಲಂ, ತಿರುವನಂತಪುರಂ, ಕೋವಳಂ ಕೇಂದ್ರಗಳನ್ನು ಈ ಟೂರ್ ತಂಡ ಸಂದರ್ಶಿಸಲಿದೆ. 12 ದಿನಗಳ ಕಾಲ ಈ ತಂಡ ಕೇರಳದಲ್ಲಿ ಠಿಕಾಣಿ ಹೂಡಿ ಆಯುರ್ವೇದ ಪ್ರವಾಸೋದ್ಯಮದ ಸಾಧ್ಯತೆಗಳ ಕುರಿತು ಅವಲೋಕನ ನಡೆಸಲಿದೆ.
ಈ ಯಾತ್ರೆಯಲ್ಲಿ ಭಾಗವಹಿಸಲಿರುವ ವಿದೇಶಿ ಟೂರ್ ಆಪರೇಟರ್ ಗಳು ಅ.24ರಂದು ಕಣ್ಣೂರು ವಿಮಾನನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಇವರನ್ನು ಕೇರಳೀಯ ಶೈಲಿಯಲ್ಲಿ ಸ್ವಾಗತಿಸುವ ನಿಟ್ಟಿನಲ್ಲಿವಿಶೇಷ ಸಿದ್ಧತೆ ನಡೆಸಲಾಗುವುದು. ಉತ್ತರ ಮಲಬಾರ್ ಪ್ರದೇಶದಲ್ಲಿ ಬಿ.ಆರ್.ಡಿ.ಸಿ. ಸಿದ್ಧಪಡಿಸಿ ಜಾರಿಗೊಳಿಸಿರುವ ಸ್ಮೈಲ್ ಯೋಜನೆ ವ್ಯಾಪ್ತಿಯ ಕಟ್ಟಡಗಳಲ್ಲಿ ಅತಿಥಿಗಳಿಗೆ ವಸತಿ ಸೌಲಭ್ಯ ಒದಗಿಸಲಾಗುವುದು. ಅ.25ರಂದು ಮಧ್ಯಾಹ್ನ 2 ಗಂಟೆಗೆ ಬೇಕಲದ ಲಲಿತ್ ರೆಸಾರ್ಟ್ ನಲ್ಲಿ ಬಿಸಿನೆಸ್ ಮೀಟ್ ನಡೆಯಲಿದೆ. ಇಲ್ಲಿ ನೋಂದಣಿ ನಡೆಸಿದ ಸ್ಥಳೀಯ ಪ್ರವಾಸೋದ್ಯಮ ಸಂಸ್ಥೆಗಳಿಗೆ ಮತ್ತು ಟೂರ್ ಆಪರೇಟರ್ ಗಳಿಗೆ ಪರಸ್ಪರ ವ್ಯವಹಾರ ಮಾತುಕತೆ ನಡೆಸುವ ನಿಟ್ಟಿನಲ್ಲಿ ಮತ್ತು ಒಕ್ಕೂಟ ರಚಿಸುವ ಉದ್ದೇಶದಿಂದ ಈ ಅವಕಾಶ ಒದಗಿಸಲಾಗಿದೆ. ಸಂಜೆ ಈ ತಂಡ ಬೇಕಲ ಬೀಚ್ ಗೆ ಭೇಟಿ ನೀಡಲಿದೆ. ನಂತರ ಬಿ.ಆರ್.ಡಿ.ಸಿ. ಮತ್ತು ಲಲಿತ ಕಲಾ ಅಕಾಡೆಮಿ ಜಂಟಿಯಾಗಿ ಜಾರಿಗೊಳಿಸುವ ಮಲಬಾರ್ ಆರ್ಟೂರ್ ವೀಕ್ಷಣೆ ನಡೆಸಿ,ಗೋಡೆಚಿತ್ರ ಕಲಾವಿದರೊಂದಿಗೆ ಸಂವಾದ ನಡೆಸಲಿದೆ. ಸಂಜೆ 6.3ಕ್ಕೆ ಬೇಕಲ ತಾಜ್ ಹೋಟೆಲ್ ನಲ್ಲಿ ಈ ಯಾತ್ರೆ ಯ ಉದ್ಘಾಟನೆ ನಡೆಯಲಿದೆ. ಯಾತ್ರೆಯ ಅಂಗವಾಗಿ ವಲಿಯ ಪರಂಬ ಹಿನ್ನೀರು, ಕುದುರುಕಾಡು, ಮಾಡಾಯಿಪಾರೆ, ಮುಳಪ್ಪಿಲಂಗಾಡ್ ಡ್ರೈವ್ ಇನ್ ಬೀಚ್, ಸರ್ಗಾಲಯ ಕಲಾಗ್ರಾಮ ಸಹಿತ ಉತ್ತರ ಮಲಬಾರ್ ಪ್ರದೇಶಗಳ ಪ್ರವಾಸಿ ತಾಣಗಳನ್ನು ಸಂದರ್ಶಿಸಲಾಗುವುದು. 16ರಂದು ಮಧ್ಯಾಹ್ನ ರಾಜ್ಯದ ಇತರ ಕಡೆಗೆ ತಂಡ ತೆರಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಎ.ಪಿ.ಎಸ್. ಅಧ್ಯಕ್ಷ ವಿ.ಸಂಜೀವ್ ಕುರುಪ್, ಉಪಾಧ್ಯಕ್ಷ ಅಜಿ ಅಲೆಕ್ಸ್ ಮೊದಲಾದವರು ಉಪಸ್ಥಿತರಿದ್ದರು.

