ಮಂಜೇಶ್ವರ: : ಕೇರಳದ ಐದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಧಾರಾಕಾರ ಮಳೆಯ ನಡುವೆಯೂ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಮಂಜೇಶ್ವರ ಶಾಸಕರಾಗಿದ್ದ ಪಿ ಬಿ ಅಬ್ದುಲ್ ರಜಾಕ್ ರವರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಮೊದಲ ಎರಡು ತಾಸುಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಬೆಳಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡು ಬಂದಿದೆ. ಬಿಗು ಪೊಲೀಸ್ ಬಂದೋಬಸ್ತ್ ನಲ್ಲಿ ಮತದಾನ ನಡೆಯುತ್ತಿದೆ . ಮೊದಲ ಬಾರಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಉಪಚುನಾವಣೆಗೆ ವೇದಿಕೆಯಾಗುತ್ತಿದ್ದು, ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ. 2017 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುರೇಂಡ್ರಾನ್ ಲೀಗಿನ ಪಿ ಬಿ ಅಬ್ದುಲ್ ರಜಾಕ್ ರ ವಿರುದ್ಧ ಕೇವಲ 87 ಮತಗಳ ಅಂತರದಲ್ಲಿ ಸೋಲನ್ನು ಕಂಡಿದ್ದರು.
2,14, 799 ಮತದಾರರನ್ನು ಹೊಂದಿರುವ ಮಂಜೇಶ್ವರ ಕ್ಷೇತ್ರದಲ್ಲಿ 198 ಮತಗಟ್ಟೆಗಳಲ್ಲಿ ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ ಆರರ ತನಾಕ ನಡೆಯಲಿದೆ. 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ 198 ಮತಗಟ್ಟೆಗಳಲ್ಲಿ ಮತದಾರರ ವಿಡಿಯೋ ರೆಕಾಡಿರ್ಂಗ್ ನಡೆಸಲಾಗುತ್ತಿದೆ. ಎಲ್ ಡಿ ಎಫ್ ಅಭ್ಯರ್ಥಿ ಶಂಕರ ರಾಯ್ ಮಾಸ್ಟರ್ ಅಂಗಡಿ ಮೊಗರು ಹಾಯ್ ಸೆಕಂಡರಿ ಶಾಲೆಯ 165 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು .
ಇಂದು ಮಧ್ಯಾಹ್ನ 1ರ ವೇಳೆಗೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಶೇ.42 ಮತಗಳು ಚಲಾವಣೆಗೊಂಡಿದೆ. ತೀವ್ರ ಮಳೆಯಿಂದ ಕಂಗೆಟ್ಟಿರುವ ಎರ್ನಾಕುಳಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಧ್ಯಾಹ್ನ ವೇಳೆಗೆ ಕೇವಲ ಶೇ.21 ಮಾತ್ರ ಮತ ಚಲಾವಣೆಯಾಗಿರುವುದಾಗಿ ತಿಳಿದುಬಂದಿದೆ. ಅರೂರಲ್ಲಿ ಶೇ.44, ಕೊನ್ನಿಯಲ್ಲಿ 42 ಶೇ, ವೆಟ್ಟಿಯೂರ್ ಕಾವಿಲ್ ಕ್ಷೇತ್ರದಲ್ಲಿ 32.49 ಶೇ. ಮತಗಳು ಚಲಾವಣೆಗೊಂಡಿರುವುದಾಗಿ ತಿಳಿದುಬಂದಿದೆ.
ಒಟ್ಟಾರೇ 896 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಂಜೇಶ್ವರಂ ಹೊರತುಪಡಿಸಿದಂತೆ ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತೀವ್ರ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಉಪ ಚುನಾವಣೆ ನಡೆಯುತ್ತಿರುವ ಐದು ಕ್ಷೇತ್ರಗಳಲ್ಲಿ ಎಲ್ ಡಿಎಫ್ ನೇತೃತ್ವದ ಸಿಪಿಐ (ಎಂ) ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.

