ಮಂಜೇಶ್ವರ: ಉಪಚುನಾವಣೆ ಸಂಬಂಧ ಸೋಮವಾರ ಜಿಲ್ಲಾಡಳಿತೆ ಬಳಸಿದ್ದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಶೇ 100 ಯಶಸ್ವಿಯಾಗಿದೆ.
ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿರ್ಮಿಸಲಾಗಿದ್ದ ನಿಯಂತ್ರಣ ಕೊಠಡಿಯಲ್ಲಿ ಈ ವೆಬ್ ಕಾಸ್ಟಿಂಗ್ ಸೌಲಭ್ಯವಿತ್ತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ವಿಧಾನಸಭಾ ಕ್ಷೇತ್ರದ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್, ಅವರ ನೇತೃವದ ಹಿರಿಯ ಅಧಿಕಾರಿಗಳು ಇಲ್ಲಿ ಮತಗಟ್ಟೆಗಳ ಚಲನವಲನಗಳನ್ನು ವೀಕ್ಷಿಸಿದರು.
20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಏರ್ಪಡಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯ ವೇಳೆಗೆ ವೆಬ್ ಕಾಸ್ಟಿಂಗ್ ಸಹಿತ ನಿಯಂತ್ರಣ ಕೊಠಡಿ ಕಾರ್ಯನಿರತವಾಗಿತ್ತು. 5.30ಕ್ಕೆ ಮೋಕ್ ಪೋಲಿಂಗ್, ಬಳಿಕ ಕ್ರಮಗಳ ವೀಕ್ಷಣೆ ಇಲ್ಲಿ ಆರಂಭಗೊಂಡಿತ್ತು. ಮೋಕ್ ಪೋಲಿಂಗ್ ವೇಳೆ ಕೆಟ್ಟುಹೋದ 4 ಇ.ವಿ.ಎಂ.ಮೆಷಿನ್, 17 ವಿವಿಪಾಟ್ ಮೆಷಿನ್ ಇತ್ಯಾದಿ ಬದಲಿಸಲು ಜಿಲ್ಲಾಧಿಕಾರಿ ನೇರವಾಗಿ ಸಂಬಂಧಪಟ್ಟವರಿಗೆ ಆದೇಶ ನೀಡಿದ್ದರು. 29 ರಿಸರ್ವ್ ಡ್ ಸಿಬ್ಬಂದಿ ಬೆಳಿಗ್ಗಿನಿಂದಲೇ ಕರ್ತವ್ಯದಲ್ಲಿದ್ದರು.
ಹೆಚ್ಚುವರಿ ದಂಡನಾಧಿಕಾರಿ ಕೆ.ಅಜೇಷ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಸಹಾಯಕ ಚುನಾವಣೆ ಅಧಿಕಾರಿ ಎನ್.ಸುರೇಂದ್ರನ್, ಜಿಲ್ಲಾ ಇನ್ ಫಾರ್ಮೆಟಿಕ್ಸ್ ಅಧಿಕಾರಿ ಕೆ.ರಾಜನ್, ಬಿ.ಎಸ್.ಎನ್.ಎಲ್. ಸಹಾಯಕ ಪ್ರಧಾನ ಪ್ರಬಂಧಕ ಲಿಯೋ ಬಿ.ಪೆರೇರ, ಅಕ್ಷಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಎನ್.ಎ.ಅಜೀಷ್ ಮೊದಲಾದವರು ಚಟುವಟಿಕೆಗಳ ನೇತೃತ್ವ ವಹಿಸಿದ್ದರು.
ಉಪಚುನಾವಣೆ ಸಂಬಂಧ ನೇಮಕಗೊಂಡಿರುವ ನೋಡೆಲ್ ಅಧಿಕಾರಿಗಳು, ಹಿರಿಯ ಪೊಲೀಸ್-ಕಂದಾಯ ಇಲಾಖೆ ಅಧಿಕಾರಿಗಳು ನಿಯಂತ್ರಣ ಕೊಠಡಿಯನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸಿದರು. ಜಿಲ್ಲಾಡಳಿತೆ ನೇಮಿಸಿದ ತಂಡವೊಂದು ನಸುಕಿನಿಂದ ಮತದಾನ ಪ್ರಕ್ರಿಯೆ ಕೊನೆಗೊಳ್ಳುವ ವರೆಗೆ ಮತಗಟ್ಟೆಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿತ್ತು.
ವೆಬ್ ಕಾಸ್ಟಿಂಗ್ ಗೆ ಬಿ.ಎಸ್.ಎನ್.ಎಲ್., ಇನ್ಸ್ ಫಾರ್ಮೆಟಿಕ್ಸ್ ಕಚೇರಿ, ಅಕ್ಷಯ ತಾಂತ್ರಿಕ ಸಹಾಯ ಒದಗಿಸಿದ್ದುವು.
ಮತಗಟ್ಟೆಗಳ ಚಲನವಲನ ವೀಕ್ಷಿಸಿದ ಜಿಲ್ಲಾಧಿಕಾರಿ ನೇತೃತ್ವದ ತಂಡ:
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಉಪಚುನಾವಣೆಯ ಮತಗಟ್ಟೆಗಳ ಚನವಲನಗಳನ್ನು ವೀಕ್ಷಿಸುವಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉಪಚುನಾವಣೆ ಸಂಬಂಧ ಸಜ್ಜುಗೊಳಿಸಲಾಗಿದ್ದ ನಿಯಂತ್ರಣ ಕೊಠಡಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮೂಲಕ ಜಿಲ್ಲಾಧಿಕಾರಿ ಅವರ ಬಳಗ ಈ ಕ್ಷೇತ್ರದ 20 ಮತಗಟ್ಟೆಗಳ ಆಗುಹೋಗುಗಳನ್ನು ನೇರವಾಗಿ ವೀಕ್ಷಿಸಿದರು.
ಮತಗಟ್ಟೆಗಳಲ್ಲಿ ನಡೆದ ಚಿಕ್ಕಪುಟ್ಟ ವ್ಯತ್ಯಾಸಗಳಿಗೆ ಸಂಬಂದಿಸಿ ಜಿಲ್ಲಾಧಿಕಾರಿ ಅವರು ಆಯಾ ಮತಗಟ್ಟೆಗಳ ಪ್ರಿಸೈಡಿಂಗ್ ಅಧಿಕಾರಿಗೆ ನೇರವಾಗಿ ಕರೆ ಮಾಡಿ ಸಲಹೆ-ಸೂಚನೆ-ಆದೇಶಗಳನ್ನು ನೀಡಿದ್ದರು. ಬೆಳಿಗ್ಗೆ 5 ಗಂಟೆ ವೇಳೆಗೆ ನಿಯಂತ್ರ ಕೊಠಡಿಯ ನೇತೃತ್ವವನ್ನು ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್ ವಹಿಸಿದ್ದರು. ನಿಯಂತ್ರಣ ಕೊಠಡಿಯಲ್ಲಿ ಇಡೀ ದಿನವಿದ್ದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸಿಬ್ಬಂದಿಯ ಕಾಯಕದ ಹುಮ್ಮಸ್ಸನ್ನು ಹೆಚ್ಚಿಸಿತ್ತು.
ನಿರೀಕ್ಷಕರ ಭೇಟಿ:
ಮತದಾನ ನಡೆದ ಮಂಜೇಶ್ವರ ವಿಧಾಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಸಾರ್ವಜನಿಕ ನಿರೀಕ್ಷಕಿ ಸುಷ್ಮಾ ಗೋಡ್ ಬೋಲೆ, ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ. ಕಮಲ್ ಸಂದರ್ಶಿಸಿದರು.
ವಿಶೇಷ ಕಾರ್ಯಕಾರಿ ನ್ಯಾಯಮೂರ್ತಿಯ ನೇಮಕ:
ವಿಧಾನಸಭಾ ಕ್ಷೇತ್ರದ 69ರಿಂದ 73 ವರೆಗಿನ ಮತಗಟ್ಟೆಗಳಲ್ಲಿ ವಿಶೇಷ ನಿಗಾ ಇರಿಸುವ ನಿಟ್ಟಿನಲ್ಲಿ ಕಾರ್ಯಕಾರಿ ನ್ಯಾಯಮೂರ್ತಿ( ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್) ಅವರನ್ನು ನೇಮಿಸಲಾಗಿದೆ. ಕಾಸರಗೋಡು ಆರ್.ಡಿ.ಒ. ಕೆ.ರವಿಕುಮಾರ್ ಅವರನ್ನು ಈ ಹೊಣೆಗಾರಿಕೆಗೆ ನೇಮಿಸಲಾಗಿದೆ. ಚುನಾವಣೆಗೆ ಸಂಬಂಧಿಸಿ ಘರ್ಷಣೆ ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಈ ನೇಮಕಾತಿ ನಡೆದಿದೆ.
ಉಪ ಚುನಾವಣಾ ಪ್ರಕ್ರಿಯೆಗಳು ಕೊನೆಗೊಳ್ಳುತ್ತಿರುವಂತೆ ಎಲ್ಲರ ಕುತೂಹಲ ಮತದಾನದ ಶೇಕಡಾವಾರಿನತ್ತ ನೆಟ್ಟಿದ್ದು, ಮಂಜೇಶ್ವರ ವಿಧಾನ ಸಭಾ ವ್ಯಾಪ್ತಿಯಲ್ಲಿ 76.25 ಶೇ.ಮತದಾನ ನಡೆದಿದೆ. ಮಿಕ್ಕುಳಿದಂತೆ ಸೋಮವಾರ ಮತದಾನ ನಡೆದಿದ್ದ ತೀವ್ರ ಮಳೆಯ ಮಧ್ಯೆಯೂ ಎರ್ನಾಕುಳಂ ಕ್ಷೇತ್ರದಲ್ಲಿ 57.86 ಶೇ. ಮತ ಚಲಾವಣೆಯಾಗಿರುವುದಾಗಿ ತಿಳಿದುಬಂದಿದೆ. ಅರೂರಲ್ಲಿ ಶೇ.80.47, ಕೊನ್ನಿಯಲ್ಲಿ 70.10 ಶೇ ಹಾಗೂ ವೆಟ್ಟಿಯೂರ್ ಕಾವಿಲ್ ಕ್ಷೇತ್ರದಲ್ಲಿ 62.66 ಶೇ. ಮತಗಳು ಚಲಾವಣೆಗೊಂಡಿರುವುದಾಗಿ ತಿಳಿದುಬಂದಿದೆ.


