ಮಂಜೇಶ್ವರ/ಉಪ್ಪಳ/ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಸೋಮವಾರ ಎಲ್ಲ ಮತಗಟೆಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಸಂದರ್ಭೋಚಿತವಾಗಿ ಆಹಾರ ವ್ಯವಸ್ಥೆಯನ್ನು ಒದಗಿಸುವಲ್ಲಿ ಕುಟುಂಬಶ್ರೀ ಪರಿಪೂರ್ಣತೆ ಸಾಧಿಸಿದೆ.
ಕುಡಿಯುವ ನೀರು, ಭೋಜನ, ಉಪಹಾರ, ಚಹಾ ಸಹಿತ ವ್ಯವಸ್ಥೆಗಳಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಕುಟುಂಬಶ್ರೀ ಘಟಕಗಳು ನಡೆಸಿದ ಚಟುವಟಿಕೆಗಳು ಮೆಚ್ಚುಗೆ ಗಳಿಸಿವೆ.
ಈ ಹಿಂದೆ ಚುನಾವಣೆಗಳೂ ನಡೆದಾಗ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಹಾರ,ನೀರು ಲಭಿಸಿದೇ ಪರದಾಡುವ ಸ್ಥಿತಿ ಒದಗುತ್ತಿತ್ತು. ಇದಕ್ಕೊಂದು ಶಾಶ್ವತ ಪರಿಹಾರ ಎಂಬಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಪ್ರತ್ಯೇಕ ಆದೇಶ ಹಿನ್ನೆಲೆಯಲ್ಲಿ ಕುಟುಂಬಶ್ರೀ ಘಟಕಗಳ ಮುಖಾಂತರ ಆಹಾರ ಸರಬರಾಜು ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 5.30ಕ್ಕೆ ಚಹಾ, 8.30ಕ್ಕೆ ಬೆಳಿಗ್ಗಿನ ಉಪಹಾರ, 11 ಗಂಟೆಗೆ ಚಹಾ ಮತ್ತು ಲಘುಉಪಹಾರ, ಮಧಾಹ್ನ ಒಂದು ಗಂಟೆಗೆ ಭೋಜನ, 3.30ಕ್ಕೆ ಚಹಾ ಒದಗಿಸಲಾಗಿತ್ತು. ಜೊತೆಗೆ ಮತದಾನ ಪೂರ್ಣಗೊಂಡು, ಮತದಾನ ಸಾಮಾಗ್ರಿಗಳನ್ನು ಮರಳಿಸುವ ಸ್ವಾಗತ ಕೇಂದ್ರಗಳಿಗೆ ಆಗಮಿಸುವ ಸಿಬ್ಬಂದಿಗೂ ಸೂಕ್ತ ಆಹಾರದ ವ್ಯವಸ್ಥೆಯನ್ನು ಕುಟುಂಬಶ್ರೀ ಒದಗಿಸಿತ್ತು.


