ಕಾಸರಗೋಡು: ಅನಿಲ ಸಾಗಾಟದ ಟ್ಯಾಂಕರ್ ಮಗುಚಿ ಆತಂಕ ಸೃಷ್ಟಿಯಾದ ಘಟನೆ ಬುಧವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಅಡ್ಕತ್ತಬೈಲ್ ನಲ್ಲಿ ನಡೆದಿದ್ದು, ಆತಂಕ ಸೃಷ್ಟಿಗೆ ಕಾರಣವಾಗಿದೆ. ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ಉನ್ನತ ತಜ್ಞರ ತಂಡ ಮುಂದಿನ ಕ್ರಮಕೈಗೊಳ್ಳಲು ಆಗಮಿಸಿದೆ.
ಬುಧವಾರ ಮುಂಜಾನೆ 1.30ರ ವೇಳೆ ಮಂಗಳೂರಿಂದ ಕೊಚ್ಚಿಗೆ ಅನಿಲ ಹೇರಿ ಸಾಗುತ್ತಿದ್ದ ಟ್ಯಾಂಕರ್ ಅಡ್ಕತ್ತಬೈಲಿನಲ್ಲಿ ನಿಯಂತ್ರಣ ತಪ್ಪಿ ಬಿದ್ದು ಅಪಾಯಕ್ಕೆ ಕಾರಣವಾಯಿತು. ಉರುಳಿಬಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿರುವುದು ಖಚಿತಗೊಳ್ಳುತ್ತಿರುವಂತೆ ಪೋಲೀಸರು ಹಾಗೂ ಅಗ್ನಿ ಶಾಮಕದಳ ನಿಯಂತ್ರಣಕ್ಕೆ ಪ್ರಯತ್ನಿಸಿದ್ದು, ಫಲಪ್ರದವಾಗದ ಕಾರಣ ಮಂಗಳೂರಿಂದ ಉನ್ನತ ತಜ್ಞರನ್ನು ಕರೆಯಿಸಬೇಕಾಯಿತು.
ಅವಘಡದ ಕಾರಣ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಜೊತೆಗೆ ಹೆದ್ದಾರಿ ಸಂಚಾರ ನಿಷೇಧಿಸಲಾಗಿದ್ದು, ವಾಹನಗಳು ಕಾಸರಗೋಡು ನಗರದಿಂದ ವಿದ್ಯಾನಗರ, ಉಳಿಯತ್ತಡ್ಕ, ಸೀತಾಂಗೋಳಿ ದಾರಿಯ ಮೂಲಕ ಮಂಗಳೂರಿಗೆ ಸಂಚರಿಸುತ್ತಿವೆ. ಇಂದು ಅಪರಾಹ್ನದ ವೇಳೆಗೆ ನಿಯಂತ್ರಣ ಕ್ರಮ ಪೂರ್ತಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

