ಮುಳ್ಳೇರಿಯ : 'ಗೋವು ಹಾಗೂ ತೆಂಗಿನ ಮರವು ಭೂಲೋಕದ ರಕ್ಷಣೆಗಾಗಿ ದೇವರು ಕೊಟ್ಟ ವರ. ಅವುಗಳನ್ನು ನಾಶ ಮಾಡುವ ಅಧಿಕಾರ ಮಾನವನಿಗೆ ಇಲ್ಲ. ಗೋವುಗಳಿಲ್ಲದೆ ಕೃಷಿಯೇ ಇಲ್ಲ. ಇದೀಗ ಪ್ರತೀ ಗ್ರಾಮ ಪಂಚಾಯಿತಿನಲ್ಲೂ ಕೂಡಾ ಒಟ್ಟು ಅನುದಾನದ ಶೇಖಡಾ 40ರಷ್ಟನ್ನು ಕೃಷಿಗೆ ಮೀಸಲಿಡಲಾಗಿದೆ. ಇದು ಅನುಷ್ಠಾನಗೊಳ್ಳುವಂತೆ ಮಾಡುವಲ್ಲಿ ಕೃಷಿಕರು ಜಾಗೃತರಾಗಬೇಕು' ಎಂದು ಪ್ರಗತಿಪರ ಕೃಷಿಕರಾದ ಬೆಳ್ಳೂರಿನ ಎಂ ಶ್ರೀಪತಿ ಹೇಳಿದರು.
ಅವರು ಶನಿವಾರ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಅಡೂರಿನ ತಲ್ಪಚ್ಚೇರಿ ಪರಮೇಶ್ವರ ಕಲ್ಲೂರಾಯರ ಮನೆಯಲ್ಲಿ ನಡೆದ ಶಿವಳ್ಳಿ ಬ್ರಾಹ್ಮಣ ಮಾಸಿಕ ಸಭೆಯಲ್ಲಿ 'ವಾಣಿಜ್ಯ ಕೃಷಿ ಬೆಳೆಗಳಿಗೆ ಪೋಷಕಾಂಶ ನೀಡಿಕೆ ಮಾನದಂಡಗಳು' ಎಂಬ ವಿಚಾರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಅಡಿಕೆ ಹಾಗೂ ತೆಂಗು ಕೃಷಿಗೆ ಜೂನ್-ಜುಲೈನಲ್ಲಿ ಸಣ್ಣಪ್ರಮಾಣದ ಪೋಷಕಾಂಶ, ಸೆಪ್ಟೆಂಬರ್-ಒಕ್ಟೋಬರ್ ತಿಂಗಳಲ್ಲಿ ಬೃಹತ್ ಪ್ರಮಾಣದ ಪೋಷಕಾಂಶ ಹಾಗೂ ಜನವರಿ-ಫೆಬ್ರವರಿ ತಿಂಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪೋಷಕಾಂಶ ನೀಡಬೇಕು. ಇದು ಪೋಷಕಾಂಶ ನೀಡಿಕೆಗೆ ಸಕಾಲ. ಈ ಅವಧಿಯಿಂದ ಹೊರತಾದ ಸಮಯದಲ್ಲಿ ನೀಡುವ ಪೋಷಕಾಂಶಗಳು ಗಿಡಗಳು ಸಮರ್ಥವಾಗಿ ಸ್ವೀಕರಿಸುವುದಿಲ್ಲ ಆದ್ದರಿಂದ ಫಸಲು ಹೆಚ್ಚದು. ಸಾಧ್ಯವಾದಷ್ಟು ತೋಟದ ತೆಂಗಿನ ಓಲೆ, ಅಡಿಕೆ ಸೋಗೆ, ಹಾಳೆ ಮೊದಲಾದ ವಸ್ತುಗಳನ್ನು ಪೋಷಕಾಂಶವಾಗಿ ಬಳಸಬಹುದು. ಸಾವಯವ ಗೊಬ್ಬರದಿಂದ ಕೃಷಿಯಿಂದ ದೀರ್ಘಕಾಲದ ಹೆಚ್ಚಿನ ಫಸಲು ಹಾಗೂ ಮರಗಳಿಗೆ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು. ನೀರಿನ ಸಮಸ್ಯೆ ಎದುರಾಗುವ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಾಳುಮೆಣಸಿದ ಬಳ್ಳಿ ಇಲ್ಲದ ಪ್ರತೀ ಅಡಿಕೆ ಮರದ ಬುಡಕ್ಕೆ ಅರ್ಧ ಕಿಲೋಗ್ರಾಂ ಉಪ್ಪು ಹಾಕಬಹುದು. ತೋಟದ ಬುಡಬಿಡಿಸಿ ಪೋಷಕಾಂಶವನ್ನು ನೀಡಬೇಕಾಗಿಲ್ಲ. ಮರದ ಬುಡದಲ್ಲಿ ಗಾಳಿಯ ಹರಿಯುವಿಕೆಗೆ ಸ್ವಲ್ಪ ಸ್ಥಳಾವಕಾಶ ಇರುವಂತೆ ಪೋಷಕಾಂಶವನ್ನು ಹರಡಬೇಕು. ತೋಟದ ತ್ಯಾಜ್ಯಗಳನ್ನೇ ಬಹುಪ್ರಮಾಣದಲ್ಲಿ ಬಳಸಿಕೊಂಡು ಕೃಷಿಯ ಪೋಷಕಾಂಶದ ಹೆಚ್ಚಿನ ಅಗತ್ಯವನ್ನು ಸರಿದೂಗಿಸಬಹುದು ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಸಭೆಯಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಎಂ ಭಾರಿತ್ತಾಯ, ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಶ್ರೀಪ್ರಕಾಶ್ ಎ, ಮುಳ್ಳೇರಿಯ ವಲಯ ಖಜಾಂಜಿ ಶ್ರೀಪ್ರಸಾದ ಭಾರಿತ್ತಾಯ, ಮುಖಂಡರಾದ ರವಿರಾಜ ಕೇಕುಣ್ಣಾಯ ಆಲಂತಡ್ಕ, ಪರಮೇಶ್ವರ ಕೇಕುಣ್ಣಾಯ ಆಲಂತಡ್ಕ, ಉದಯ ಕುಮಾರ್ ಎ, ಮಹಾದೇವ ಕಲ್ಲೂರಾಯ, ಕಮಲಾಕ್ಷಿ, ಲೀಲಾವತಿ, ಜ್ಯೋತಿ, ವಿಜಯ ಪಿ ಕಲ್ಲೂರಾಯ ಟಿ, ಪಿ ಎಸ್ ನಾರಾಯಣ ಕೆದಿಲಾಯ ಮೊದಲಾದವರು ಭಾಗವಹಿಸಿದ್ದರು. ಸ್ವಯಂಪ್ರಭಾ ಪ್ರಾರ್ಥಿಸಿದರು. ಪರಮೇಶ್ವರ ಕಲ್ಲೂರಾಯ ಸ್ವಾಗತಿಸಿ, ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ ತಂತ್ರಿ ವಂದಿಸಿದರು.


