ಮಂಜೇಶ್ವರ: ಮೂಡಂಬೈಲು ಸರ್ಕಾರಿ ಶಾಲೆಯ ಹೈಸ್ಕೂಲ್ ವಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಪಾಠ ಮಾಡಲು ನೇಮಕಗೊಂಡು ಹಾಜರಾಗಲು ಬಂದ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕನನ್ನು ವಿದ್ಯಾರ್ಥಿಗಳು, ಹೆತ್ತವರು, ರಕ್ಷಕ ಶಿಕ್ಷಕ ಸಂಘ ಹಾಗು ಸ್ಥಳೀಯರು ತಡೆದರು. ಈ ಹಿನ್ನೆಲೆಯಲ್ಲಿ ಅಧ್ಯಾಪಕ ಶಾಲೆಗೆ ಬುಧವಾರ ಕರ್ತವ್ಯಕ್ಕೆ ಹಾಜರಾಗಲು ಬಂದು ಪ್ರವೇಶ ದ್ವಾರದಿಂದಲೇ ವಾಪಸಾಗಿದ್ದಾರೆ.
ಮೀಂಜ ಪಂಚಾಯತಿಯ ಅಚ್ಚಗನ್ನಡ ಪ್ರದೇಶವಾದ ಮೂಡಂಬೈಲು ಸರ್ಕಾರಿ ಶಾಲೆಯ ಹೈಸ್ಕೂಲ್ ವಿಭಾಗ ಎಚ್.ಎಸ್.ಟಿ. ಕನ್ನಡ ಹುದ್ದೆಗೆ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕನನ್ನು ನೇಮಿಸಲಾಗಿತ್ತು. ಅ.31 ರೊಳಗೆ ಶಾಲೆಗೆ ಹಾಜರಾಗಲು ನೇಮಕ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಅದರಂತೆ ಬುಧವಾರ ಶಾಲೆಗೆ ಹಾಜರಾಗಲು ಅಧ್ಯಾಪಕ ಬಂದಿದ್ದರು. ಆದರೆ ವಿದ್ಯಾರ್ಥಿಗಳು ಶಾಲಾ ಗೇಟ್ ಮುಚ್ಚಿ ಅಧ್ಯಾಪಕ ಶಾಲೆಯ ಕಂಪೌಂಡಿನೊಳಗೆ ಪ್ರವೇಶಿಸದಂತೆ ತಡೆದರು. ವಿದ್ಯಾರ್ಥಿಗಳಿಗೆ ಪೆÇೀಷಕರು, ರಕ್ಷಕ ಶಿಕ್ಷಕ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಸಮಾಜ ಸೇವಕರು ಮೊದಲಾದವರು ಬೆಂಬಲ ನೀಡಿದ್ದರು.
ಅಧ್ಯಾಪಕನನ್ನು ಯಾವುದೇ ಕಾರಣಕ್ಕೂ ಅಧಿಕಾರ ವಹಿಸಿಕೊಳ್ಳದಂತೆ ತಡೆಯುವುದಾಗಿ ಈ ಹಿಂದೆ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಅದರಂತೆ ಅಧ್ಯಾಪಕರನ್ನು ಶಾಲೆ ಕಂಪೌಂಡ್ನೊಳಗೆ ಪ್ರವೇಶಿಸದಂತೆ ತಡೆದಿದ್ದಾರೆ. ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದರು.
ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್, ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಾಜಿ ಪಂಚಾಯತಿ ಸದಸ್ಯ ಜಯರಾಮ, ಗ್ರಾ.ಪಂ. ಸದಸ್ಯೆ ಚಂದ್ರಾವತಿ, ಜಗದೀಶ್ ಮೂಡಂಬೈಲು, ಗೋಪಾಲ ಚೆಟ್ಟಿಯಾರ್ ಅರಿಬೈಲು, ರಮೇಶ್ ಸುವರ್ಣ, ಟಿ.ಡಿ.ಸದಾಶಿವ ರಾವ್, ಶರೀಫ್ ಚೀನಾಲ, ಆನಂದ, ಜನಾರ್ಧನ, ಹರಿಜೀವನ್, ಆರಿಫ್ ಮಚ್ಚಂಪಾಡಿ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.