ಕಾಸರಗೋಡು: ಕೇರಳದ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಮೂರು ಸ್ಥಾನ ಪಡೆದುಕೊಂಡಿದ್ದರೆ, ಎರಡು ಸ್ಥಾನಗಳಲ್ಲಿ ಆಡಳಿತಾರೂಢ ಎಡರಂಗ ಗೆಲುವು ಸಾಧಿಸಿದೆ. ಲೋಕಸಭಾ ಚುನಾವಣೆಯ 20ಸ್ಥಾನಗಳಲ್ಲಿ ಏಕೈಕ ಸ್ಥಾನ ಗೆದ್ದು ಹೀನಾಯ ಸೋಲನುಭವಿಸಿದ್ದ ಎಡರಂಗಕ್ಕೆ ವಿಧಾನಸಭೆಯಲ್ಲಿ ಎರಡು ಸ್ಥಾನ ಲಭಿಸುವ ಮೂಲಕ ಚೇತರಿಕೆ ಕಾಣಿಸಿಕೊಂಡಿದೆ.
ತನ್ನ ಸಿಟ್ಟಿಂಗ್ ಸೀಟ್ ಅರೂರ್ನಲ್ಲಿ ಎಡರಂಗ ಸೋಲನುಭವಿಸಿದ್ದರೂ, ವಟ್ಟಿಯೂರ್ಕಾವು ಮತ್ತು ಕೊನ್ನಿ ಸ್ಥಾನವನ್ನು ಐಕ್ಯರಂಗದಿಂದ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಐಕ್ಯರಂಗ ಅರೂರ್, ಎರ್ನಾಕುಳಂ, ಮಂಜೇಶ್ವರದಲ್ಲಿ ಗೆಲುವು ಸಾಧಿಸಿದೆ. ಮಂಜೇಶ್ವರ ಮತ್ತು ಕೊನ್ನಿಯಲ್ಲಿ ಹೆಚ್ಚಿನ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಗೆ ಎರಡೂ ಸ್ಥಾನಗಳೂ ಕೈತಪ್ಪಿದೆ. ಮಂಜೇಶ್ವರದಲ್ಲಿ ಎಂ.ಸಿ ಕಮರುದ್ದೀನ್, ಎರ್ನಾಕುಳಂನಲ್ಲಿ ಟಿ.ಜೆ ವಿನೋದ್, ಅರೂರ್ನಲ್ಲಿ ಶಾನಿಮೋಳ್ ಉಸ್ಮಾನ್(ಐಕ್ಯರಂಗ), ಕೊನ್ನಿಯಲ್ಲಿ ಕೆ.ಯು ಜನೀಶ್ ಕುಮಾರ್ ಹಾಗೂ ವಟ್ಟಿಯೂರ್ಕಾವಿನಲ್ಲಿ ವಿ.ಕೆ ಪ್ರಶಾಂತ್(ಎಡರಂಗ)ಗೆಲುವು ಸಾಧಿಸಿದ್ದಾರೆ. ಮಂಜೇಶ್ವರ ಹೊರತುಪಡಿಸಿ, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ತೃತೀಯ ಸ್ಥಾನ ಪಡೆದುಕೊಂಡಿದೆ.


