ಕುಂಬಳೆ: ಕೆನರ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿ.ಒ.ಡಿ.ಪಿ) ಮಂಗಳೂರು ಮತ್ತು ಸಿ.ಇ.ಐ. ಸಂಸ್ಥೆಯ ಜಂಟಿ ಆಶ್ರಯದಲ್ಲಿ ಸಾವಯವ ಕೃಷಿ ಮತ್ತು ಕೈತೋಟ ಬೆಳೆಸುವ ಬಗ್ಗೆ ಜಾಗೃತಿ ಕಾರ್ಯಗಾರ ಕುಂಬಳೆ ಸಂತ ಮೋನಿಕಾ ಶಾಲೆಯ ವಿಧ್ಯಾರ್ಥಿಗಳಿಗೆ ಇತ್ತೀಚೆಗೆ ನಡೆಸಲಾಯಿತು.
ಕಾರ್ಯಕ್ರಮವನ್ನು ಸಂತ ಮೋನಿಕಾ ಶಾಲೆಯ ಪ್ರಾಂಶುಪಾಲ ವಂದನೀಯ ಸ್ವಾಮಿ ಅನಿಲ್ ಪ್ರಕಾಶ್ ಡಿ'ಸಿಲ್ವಾ ಅವರು ಉದ್ಘಾಟಿಸಿ ಮಾತನಾಡಿ ನಮ್ಮ ಶಾಲಾ ಚಟುವಟಿಕೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಣೆ ಮಾಡುವ ಮಹತ್ತರ ಜವಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಕನಿಷ್ಠ ನಮ್ಮ ಶಾಲೆ ಮತ್ತು ಮನೆಯಲ್ಲಿ ಸಾವಯವ ತರಕಾರಿ ಕೈತೋಟ ಬೆಳೆಸುವಂತೆ ಕರೆನೀಡಿದರು.
ಸಿ.ಒ.ಡಿ.ಪಿ. ಸಂಸ್ಥೆಯ ಸಂಯೋಜಕ ಪೀಟರ್ ಪೌಲ್ ಅವರು ತರಬೇತಿಯ ಉದ್ದೇಶವನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕುಂಬಳೆ ಕೃಷಿ ಭವನದ ಅಧಿಕಾರಿ ಚಂಚಲ ಅವರು ರಾಸಾಯನಿಕ ಗೊಬ್ಬರದಿಂದ ನಮ್ಮ ಮಣ್ಣು ಮತ್ತು ಆರೋಗ್ಯ ಹೇಗೆ ಹಾಳಾಗುತ್ತಿದೆ, ಸಾವಯವ ಗೊಬ್ಬರ ಉಪಯೋಗಿಸಿ ಕೈತೋಟವನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಬಗ್ಗೆ ಸಿ.ಒ.ಡಿ.ಪಿ. ಸಂಸ್ಥೆಯ ಸಂಯೋಜಕ ರವಿ ಕುಮಾರ್ ಕ್ರಾಸ್ತ ಅವರು ಮಾಹಿತಿಯನ್ನು ನೀಡಿದರು. ಕಾರ್ಯಕರ್ತೆ ಸವಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


