ಕಾಸರಗೋಡು: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎ.ಪಿ ಅಬ್ದುಲ್ಲ ಕುಟ್ಟಿ ಅವರನ್ನು ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷರನ್ನಾಗಿ ಪಕ್ಷ ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಎಐಎಸ್ಎಫ್ ರಾಜ್ಯಸಮಿತಿ ಮಾಜಿ ಉಪಾಧ್ಯಕ್ಷ ಕೆ.ಎ ಬಾಹುಲೆ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಸಿಪಿಎಂನಿಂದ ಎರಡು ಬಾರಿ ಕಣ್ಣೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅಬ್ದುಲ್ಲಕುಟ್ಟಿ ಅವರು ನರೇಂದ್ರ ಮೋದಿ ಅವರ ಗುಣಗಾನಮಾಡಿದ ನೆಪದಲ್ಲಿ ಇವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ನಂತರ ಕಾಂಗ್ರೆಸ್ ಸೇರ್ಪಡೆಗೊಂಡ ಇವರು, ಶಾಸಕರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭ ಸಾಮಾಜಿಕಜಾಲ ತಾಣಗಳ ಮೂಲಕ ನರೇಂದ್ರಮೋದಿ ಅವರ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನಡೆಸಿದ ಪರಾಮರ್ಶೆ ಇವರನ್ನು ಕಾಂಗ್ರೆಸ್ನಿಂದ ಅಮಾನತುಗೊಳಿಸಲು ಕಾರಣವಾಗಿತ್ತು.
ಪಕ್ಷ ನೀಡಿದ ದೊಡ್ಡ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವೆನು. ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ತನ್ನನ್ನು ಎರಡೂ ಪಕ್ಷಗಳು ಸಂಶಯದ ದೃಷ್ಟಿಯಿಂದ ನೋಡಿದ್ದು, ಪ್ರಸಕ್ತ ಯುವಸಮುದಾಯ ಯಾಕೆ ನರೇಂದ್ರಮೋದಿ ಅವರತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಬಗ್ಗೆ ಎರಡೂ ರಂಗಗಳು ಆತ್ಮಾವಲೋಕನ ನಡೆಸಲಿ ಎಂದು ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.


