ಕಾಸರಗೋಡು: ಕೇರಳ ಲೋಕಸೇವಾ ಆಯೋಗದ ಕನ್ನಡ ಬಲ್ಲ ಎಲ್ಡಿ ಕ್ಲರ್ಕ್ ಹುದ್ದೆ ನೇಮಕಾತಿಯ ಅರ್ಜಿ ಆಹ್ವಾನ ಸಮಯದಲ್ಲಿ ಸೂಚಿಸಿದ ಮಾನದಂಡಕ್ಕೆ ವಿರುದ್ಧವಾಗಿ ಪರೀಕ್ಷೆ ನಡೆಸಿದ ಪಿ.ಎಸ್.ಸಿ ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಅನ್ಯಾಯವೆಸಗಿರುವುದಾಗಿ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀ ಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅ. 22ರಂದು ನಡೆದ ಪಿ.ಎಸ್ಸಿ ಪರೀಕ್ಷೆಯಲ್ಲಿ ಕೇವಲ ಬೆರಳೆಣಿಕೆಯ ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದು ಉಳಿದವುಗಳೆಲ್ಲವೂ ಮಲಯಾಳದಲ್ಲಿ ಪ್ರಕಟಿಸುವ ಮೂಲಕ ಕನ್ನಡಿಗರನ್ನು ಸರ್ಕಾರಿ ಕೆಲಸದಿಂದ ಉದ್ದೇಶಪೂರ್ವಕವಾಗಿ ವಂಚಿಸುವಂತೆ ಮಾಡಲಾಗಿದೆ. ಜತೆಗೆ ಎಲ್.ಡಿ.ಕ್ಲರ್ಕ್ ಹುದ್ದೆ ಬಡ್ತಿಗಾಗಿರುವ ಪ್ರಶ್ನೆ ಪತ್ರಿಕೆ ಸಂಪೂರ್ಣ ಮಲಯಾಳ ಭಾಷೆಯಲ್ಲೇ ಮುದ್ರಣಗೊಂಡಿರುವುದು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರ ಮೇಲೆ ಸರ್ಕಾರ ತೋರುತ್ತಿರುವ ವಂಚನೆಗೆ ಸಾಕ್ಷಿಯಾಗಿದೆ. ಮಂಗಳವಾರ ನಡೆದ ಎಲ್ಡಿ ಕ್ಲರ್ಕ್ ಹುದ್ದೆಯ ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ನಡೆಸುವ ಮೂಲಕ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ಎಸಗಿರುವ ಅನ್ಯಾಯ ಸರಿಪಡಿಸದಿದ್ದರೆ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು. ಕಾಸರಗೋಡು ಜಿಲ್ಲೆಯ ಕನ್ನಡ ಉದ್ಯೋಗಾರ್ಥಿಗಳಿಗೆ ಮಾಡಿರುವ ಈ ಅನ್ಯಾಯವನ್ನು ಎದುರಿಸಲು ಎಲ್ಲ ಕನ್ನಡಿಗರೂ ಮುಂದೆ ಬರಬೇಕು. ಕನ್ನಡಿಗರನ್ನು ನಿರಂತರ ಅವಗಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜರಾಗಬೇಕು ಶ್ರೀಕಾಂತ್ ಆಗ್ರಹಿಸಿದರು.
ಎಡಪಕ್ಷದ ವಿದ್ಯಾರ್ಥಿ, ಯುವಜನ ಸಂಘಟನೆಗಳ ನೇತಾರರು ಮತ್ತು ಕುಟುಂಬದವರನ್ನು ಅನಧಿಕೃತವಾಗಿ ನೇಮಕ ಮಾಡಲು ಪಿ.ಎಸ್.ಸಿ ಈ ರೀತಿಯ ಅವ್ಯವಹಾರಕ್ಕೆ ಮುಂದಾಗಿದೆ. ಪಿಎಸ್ಸಿಯ ಈ ಧೋರಣೆ ಬಗ್ಗೆ ಪರೀಕ್ಷೆಯ ಮೊದಲೇ ಬಿಜೆಪಿ ಮುನ್ನೆಚ್ಚರಿಕೆಯನ್ನೂ ನೀಡಿತ್ತು. ಕಾಸರಗೋಡು ಜಿಲ್ಲೆಯ ಹೊರಗೆ ಪರೀಕ್ಷಾ ಕೇಂದ್ರವನ್ನು ಗುರುತಿಸುವಲ್ಲೂ ದುರುದ್ದೇಶ ಅಡಕವಾಗಿದೆ. ಇಂತಹ ವಂಚನೆಗೆ ಸಹಾಯೊದಗಿಸಿದ ಉನ್ನತ ಉದ್ಯೋಗಸ್ಥರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಎಡ ಹಾಗೂ ಐಕ್ಯರಂಗಗಳು ಮತ್ತು ಜನಪ್ರತಿನಿಧಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಶ್ರೀಕಾಂತ್ ಸವಾಲುಹಾಕಿದರು.

